ಗಂಗಾವತಿ: ಹಿಂದು ಮಹಾಮಂಡಳಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಗರದ ಎಂ.ಜಿ. ರಸ್ತೆಯ ದೊಡ್ಡ ಜಾಮಿಯಾ ಮಸೀದಿಗೆ ಆರತಿ ಎತ್ತಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಸೋಮವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಶ್ರೀಕಾಂತ ಹೊಸ್ಕೇರಾ, ಕುಮಾರ ಹೂಗಾರ್, ಚನ್ನಬಸವ ಹೂಗಾರ್, ಸಂಗಮೇಶ ಅಯೋಧ್ಯಾ ಮತ್ತು ಯಮನೂರ ರಾಠೋಡ ವಿರುದ್ಧ ಶಾಂತಿ ಕದಡುವ ಪ್ರಕರಣ ದಾಖಲಾಗಿದೆ.
ಹಿನ್ನೆಲೆ: ನಗರದ ಬಸ್ ನಿಲ್ದಾಣ ಬಳಿ ಹಿಂದು ಮಹಾಮಂಡಳಿಯಿಂದ ಗಣೇಶ ಮೂರ್ತಿ ಪ್ರತಿಷ್ಟಾಪಿಸಿದ್ದು, ಸೆ.28ರಂದು ವಿಸರ್ಜನೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಇದು ದೊಡ್ಡ ಜಾಮಿಯಾ ಮಸೀದಿ ಬಳಿ ಬರುತ್ತಿದ್ದಂತೆ ಆರೋಪಿಗಳು ಹಿಂದು ಪರ ೋಷಣೆ ಕೂಗಿದರಲ್ಲದೆ, ಮಸೀದಿಗೆ ಆರತಿ ಎತ್ತಿದ್ದಾರೆ. ದೃಶ್ಯಾವಳಿಗಳನ್ನು ಕೆಲವರು ವಿಡಿಯೋ ಮಾಡಿದ್ದು, ಯಮನೂರ ರಾಠೋಡ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಶಾಂತಿ ಕದಡುವ ಉದ್ದೇಶದಿಂದಲೇ ಆರತಿ ಎತ್ತಿದ್ದಾರೆ ಎಂದು ಮುಸ್ಲಿಂ ಸಮುದಾಯದ ನವಾಜ್ ಹುಸೇನ್ ಎಂಬಾತ ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು, ಗಸ್ತು ಮೇಲಿದ್ದ ಪೇದೆ ಶ್ರೀಶೈಲ ಎಂಬುವರ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.