ಗಂಗಾವತಿ: ಓರಿಸ್ಸಾದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ದಾಳಿ ನಡೆಸಿದ ಕೋಮುವಾದಿ ಭಜರಂಗದಳ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಎಐಸಿಸಿಟಿಯು ತಾಲೂಕು ಸಮಿತಿ ತಾಲೂಕು ಆಡಳಿತದ ಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಮನವಿ ಸಲ್ಲಿಸಿತು.
ಸಮಿತಿ ರಾಜ್ಯ ಉಪಾಧ್ಯಕ್ಷ ಜೆ.ಭಾರದ್ವಾಜ್ ಮಾತನಾಡಿ, ಓರಿಸ್ಸಾದ ಬರ್ಗಡ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯತ್ಯುತ್ಸವದ ರ್ಯಾಲಿ ಮೇಲೆ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾರೆ. ದಲಿತ ಮತ್ತು ಶೋಷಿತ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಭಜರಂಗದಳ ದಾಳಿ ನಡೆಸುತ್ತಿದ್ದು, ಅಶಾಂತಿ ಸೃಷ್ಟಿಸುತ್ತಿದ್ದಾರೆ. ಕೋಮುವಾದದ ಮೂಲಕ ದೇಶದ ಶಾಂತಿ ಕದಡುವ ಭಜರಂಗ ದಳವನ್ನು ಕೂಡಲೇ ನಿಷೇಧಿಸುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ವಸೀಂ, ಚಾಂದ್ಪಾಷಾ, ಮಹ್ಮದ್ ಯಾಜ್ ಇತರರಿದ್ದರು.