ಶಿವಮೊಗ್ಗ: ವೀರ ಸಾವರ್ಕರ್ ಫ್ಲೆಕ್ಸ್ ವಿವಾದದ ನಡುವೆಯೂ ಪ್ರತಿಷ್ಠಿತ ಹಿಂದು ಮಹಾಸಭಾ ಗಣಪತಿ ಮೂರ್ತಿಯ ಮರೆವಣಿಗೆ ವೈಭವಯುತವಾಗಿ ಶನಿವಾರ ಬೆಳಗ್ಗಿನ ಜಾವ ತುಂಗಾ ನದಿಯ ಭೀಮನ ಮಡುವು ಸೇರಿತು. ಇದೇ ಮೊದಲ ಬಾರಿಗೆ ಬರೋಬ್ಬರಿ 18 ಗಂಟೆ ರಾಜಬೀದಿ ಉತ್ಸವ ನಡೆಯಿತು. ಲಕ್ಷಾಂತರ ಜನರು ಅದ್ದೂರಿ ಗಣೇಶೋತ್ಸವಕ್ಕೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.
ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಮಹಾಮಂಗಳಾರತಿ ಬಳಿಕ ಬೆಳಗ್ಗೆ 10ಕ್ಕೆ ಆರಂಭಗೊಂಡಿದ್ದ ರಾಜಬೀದಿ ಉತ್ಸವು ಶನಿವಾರ ಬೆಳಗಿನಜಾವ 4 ಗಂಟೆಗೆ ತುಂಗಾ ನದಿಯಲ್ಲಿ ಭಕ್ತರ ಹರ್ಷೋದ್ಗಾರಗಳೊಂದಿಗೆ ವಿಸರ್ಜನೆಗೊಂಡಿತು. ಬೆಳಗಿನಜಾವದವರೆಗೂ ಮಹಿಳೆಯರು, ಮಕ್ಕಳಾದಿಯಾಗಿ ಸಾವಿರಾರು ಭಕ್ತರು ಪಾಲ್ಗೊಂಡು ಹಿಂದು ಮಹಾಸಭಾ ಗಣಪತಿ ತುಂಗೆಯ ಮಡಿಲು ಸೇರಿದ್ದನ್ನು ಕಣ್ತುಂಬಿಕೊಂಡರು.
ಪ್ರತಿವರ್ಷ ಬೆಳಗ್ಗೆ 10ಕ್ಕೆ ಆರಂಭಗೊಳ್ಳುತ್ತಿದ್ದ ರಾಜಬೀದಿ ಉತ್ಸವ ತಡರಾತ್ರಿ 2 ಗಂಟೆಯೊಳಗೆ ವಿಸರ್ಜನೆಗೊಳ್ಳುತ್ತಿತ್ತು. ಆದರೆ ಭಕ್ತರ ಸಂಭ್ರಮ ಹೆಚ್ಚಾಗಿದ್ದರಿಂದ ಮೆರವಣಿಗೆ ಮಂದಗತಿಯಲ್ಲಿ ಸಾಗಿತು. ಇದರಿಂದ ಗಣೇಶ ಮೂರ್ತಿ 2 ಗಂಟೆ ತಡವಾಗಿ ವಿಸರ್ಜನೆಗೊಂಡಿತು. ಸುದೀರ್ಘ ಮೆರವಣಿಗೆಯುದ್ದಕ್ಕೂ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡ ಪರಿಣಾಮ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗಲಿಲ್ಲ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರು, ಮಹಿಳೆಯರು ಪಾಲ್ಗೊಂಡರು.