| ರಾಘವ ಶರ್ಮ ನಿಡ್ಲೆ, ನವದೆಹಲಿ
ದೆಹಲಿಯ ರಾಜ್ಘಾಟ್ ಪ್ರದೇಶದಲ್ಲಿರುವ ಮಹಾತ್ಮ ಗಾಂಧಿ ಸಮಾಧಿ ಅಕ್ಷರಶಃ ಜಲಸಮಾಧಿಯಾಗಿದೆ. ಪ್ರವೇಶ ದ್ವಾರ ಸೇರಿದಂತೆ ನಾಲ್ಕೂ ದಿಕ್ಕುಗಳು ಜಲಾವೃತಗೊಂಡಿದ್ದು, ಸಮಾಧಿ ಸ್ಥಳವೂ ಮುಳುಗಿಹೋಗಿದೆ.
ಯಮುನಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಕೊಳವೆಗಳಿಂದ ತುಂಬಿ ಹೋಗಿದ್ದು, ನದಿ ನೀರು ನಗರವನ್ನು ಆಕ್ರಮಿಸುತ್ತಿದೆ. ಅಲ್ಲಲ್ಲಿ ಹಾವು ಸೇರಿದಂತೆ ಇತರೆ ಜಲಚರಗಳು ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರನ್ನು ಆತಂಕದಲ್ಲಿ ದಿನಕಳೆವಂತೆ ಮಾಡಿದೆ. ಗುರುವಾರ ಸಂಜೆ ವೇಳೆಗೆ ಯಮುನಾ ನದಿಯ ದೆಹಲಿ ಜಲಮಾಪನ ಕೇಂದ್ರದಲ್ಲಿ 208.75 ಮೀಟರ್ ನೀರಿನ ಮಟ್ಟ ದಾಖಲಾಗಿತ್ತು. ಶುಕ್ರವಾರ ಬೆಳಗ್ಗೆ 208.35 ಮೀ ಎಂದು ದಾಖಲಾಗಿತ್ತು. ಆದರೆ, ಮಧ್ಯರಾತ್ರಿ ನಂತರ ನದಿಯಲ್ಲಿ ನೀರು ಹೆಚ್ಚಾಗಿ, ರಾಜಘಾಟ್ ಸೇರಿ ಸುತ್ತಮುತ್ತಲಿನ ರಸ್ತೆಗಳೆಲ್ಲವೂ ಪ್ರವಾಹ ನೀರು ಹರಿದುಬಂದಿದೆ.
ಯಮುನೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ, ರಾಜ್ಘಾಟ್ ಹಾಗೂ ಇತರೆ ಪ್ರವಾಸಿ ತಾಣಗಳು ಸಹಜ ಸ್ಥಿತಿಗೆ ಬಂದರೂ, ಮುಂದಿನ ಹಲವು ದಿನಗಳ ಕಾಲ ಪ್ರವಾಸಿಗರಿಗೆ ಈ ಪ್ರದೇಶವನ್ನು ಮುಕ್ತಗೊಳಿಸಲು ಸಾಧ್ಯವೇ ಇಲ್ಲ. ತುಂಬಿರುವ ಕೆಸರು, ಕಸ ಕಡ್ಡಿಗಳಿಂದ ಪರಿಸರ ಸ್ವಚ್ಛಗೊಳಿಸಲೇ ಸಾಕಷ್ಟು ಸಮಯ ಬೇಕಾದೀತು. ಇಲ್ಲಿನ ಮೂಲಸೌಕರ್ಯಗಳು ನಾಶಗೊಂಡಿವೆ ಎಂದು ಅಲ್ಲಿನ ಸಿಬ್ಬಂದಿ ವರ್ಷ ವಿಜಯವಾಣಿ ಜತೆ ಮಾಹಿತಿ ಹಂಚಿಕೊಂಡರು.
ಪ್ರವಾಹ ಮಾಹಿತಿ ಪಡೆದ ಪ್ರಧಾನಿ: ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ದೂರವಾಣಿ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ಮಾತನಾಡಿ, ಪ್ರವಾಹದ ಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಪರಿಹಾರ ಕಾರ್ಯಾಚರಣೆಗೆ ಸೇನೆಯನ್ನು ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ನಿರಾಶ್ರಿತ ಕೇಂದ್ರದಲ್ಲಿ ಗೋಳಾಟ: ಯಮುನಾ ನದಿ ತೀರದ ಅಕ್ಷರಧಾಮ ದೇಗುಲ ಪಕ್ಕದ ಮಯೂರ್ ವಿಹಾರ್ನಲ್ಲಿ ಬೃಹತ್ ನಿರಾಶ್ರಿತ ಕೇಂದ್ರ ನಿರ್ಮಾಣ ಮಾಡಲಾಗಿದೆ. ಸಣ್ಣ ಜೋಪಡಿಗಳಲ್ಲಿ ನೆಲೆಸುತ್ತಿದ್ದ ಕುಟುಂಬಗಳಲ್ಲಿ ರೋದನ ಮುಗಿಲುಮುಟ್ಟಿದೆ. ಮನೆಗಳಲ್ಲಿ ಸಾಮಗ್ರಿಗಳೆಲ್ಲ ಕೊಚ್ಚಿ ಹೋಗಿವೆ. ಮಕ್ಕಳ ಪುಸ್ತಕ, ದಾಖಲೆಗಳೂ ಯಮುನೆ ಪಾಲಾಗಿದೆ. ನಿರಾಶ್ರಿತರ ಕೇಂದ್ರದಲ್ಲಿ ಗುರುದ್ವಾರದವರು, ಸರ್ಕಾರೇತರ ಸಂಸ್ಥೆಗಳು ನಮಗೆ ಆಹಾರ ನೀಡುತ್ತಿದ್ದಾರೆ. ಸರ್ಕಾರ ಏನು ಮಾಡುತ್ತಿದೆ ಎಂದು ಸಂತ್ರಸ್ತರು ಪ್ರಶ್ನಿಸುತ್ತಿದ್ದಾರೆ. ನೀರು ತಗ್ಗಿದ ಬಳಿಕ ಬದುಕಿನ ದಾರಿ ಏನು ಎಂಬ ಪ್ರಶ್ನೆಗೆ ಯಾರಿಗೂ ಉತ್ತರ ಸಿಗುತ್ತಿಲ್ಲ.
ಈತ ಗಂಡಸಿಯ ಸಾಹಸಿ: ಚಿರತೆಯನ್ನು ಹಿಡಿದು ಬೈಕ್ಗೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ!