ಬೆಂಗಳೂರು: ಪ್ರಸಕ್ತ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ. ಮೊದಲ 8 ಪಂದ್ಯಗಳಲ್ಲಿ 7 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇದರಿಂದ ಈ ಬಾರಿಯೂ ಕಪ್ ನಮ್ಮದಲ್ಲ ಎಂಬ ಕೂಗು ಅಭಿಮಾನಿಗಳಲ್ಲಿ ಕೇಳಿಬಂದಿತ್ತು. ಆದರೆ, ಪವಾಡವೆಂಬಂತೆ ಸತತ 6 ಗೆಲುವಿನೊಂದಿಗೆ ಪ್ಲೇಆಫ್ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಮೇ 18ರಂದು ನಡೆದ ನಾಕೌಟ್ ಕದನದಲ್ಲಿ ಸಿಎಸ್ಕೆಯಂತಹ ಅಗ್ರ ತಂಡವನ್ನು ಸೋಲಿಸುವ ಮೂಲಕ ಫಾಫ್ ಡುಪ್ಲೆಸಿಸ್ ಪಡೆ ಪ್ಲೇಆಫ್ ಪ್ರವೇಶಿಸಿದೆ. ಆದರೆ, ಚೆನ್ನೈ ಅಭಿಮಾನಿಗಳು ಆರ್ಸಿಬಿ ಗೆಲುವಿನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಕೆಕೆಆರ್, ಎಸ್ಆರ್ಎಚ್, ಆರ್ಆರ್ ಮತ್ತು ಆರ್ಸಿಬಿ ಪ್ಲೇಆಫ್ ಪ್ರವೇಶ ಪಡೆದಿವೆ. ಈ ನಾಲ್ಕರಲ್ಲಿ ಕೆಕೆಆರ್, ಎಸ್ಆರ್ಎಚ್ ಮತ್ತು ಆರ್ಆರ್ ಪ್ಲೇಆಫ್ ಪ್ರವೇಶ ಮೊದಲೇ ಖಚಿತವಾಗಿತ್ತು. ಆದರೆ, ಚೆನ್ನೈ 13 ಪಂದ್ಯಗಳನ್ನು ಆಡಿ 12 ಅಂಕ ಗಳಿಸಿತ್ತು. ಆರ್ಸಿಬಿ ಕೂಡ 13 ಪಂದ್ಯಗಳಲ್ಲಿ 12 ಅಂಕ ಪಡೆದಿತ್ತು. ಆದರೆ, ನೆಟ್ ರನ್ರೇಟ್ನಲ್ಲಿ ಆರ್ಸಿಬಿಗಿಂತ ಚೆನ್ನೈ ಮುಂದಿತ್ತು. ಹೀಗಾಗಿ ಮೇ 18ರಂದು ನಡೆದ ನಿರ್ಣಾಯಕ ಪಂದ್ಯದಲ್ಲಿ ಆರ್ಸಿಬಿ, ಚೆನ್ನೈ ತಂಡವನ್ನು ಮೊದಲು ಬ್ಯಾಟ್ ಮಾಡಿದರೆ 18 ರನ್ಗಳ ಅಂತರದಿಂದ ಮತ್ತು ಚೇಸಿಂಗ್ ಮಾಡಿದರೆ 18.1 ಓವರ್ಗಳಲ್ಲಿ ಪಂದ್ಯವನ್ನು ಗೆಲ್ಲಬೇಕಾಗಿತ್ತು. ಈ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಆರ್ಸಿಬಿ ಅಗತ್ಯ ರನ್ ರೇಟ್ನೊಂದಿಗೆ ಗೆದ್ದು ಪ್ಲೇಆಫ್ ಪ್ರವೇಶ ಪಡೆಯಿತು.
ಈ ಪಂದ್ಯಕ್ಕೂ ಮುನ್ನವೇ ಆರ್ಸಿಬಿ ಪ್ಲೇಆಫ್ ಪ್ರವೇಶ ಪಡೆಯಲಿದೆ ಎಂದು ಅಂದಾಜಿಸಲಾಗಿತ್ತು. ಅದರಲ್ಲೂ ಆನ್ಲೈನ್ ಪ್ರಸಾರದ ಹಕ್ಕನ್ನು ಪಡೆದಿರುವ ಜಿಯೋ ಸಿನಿಮಾ ತನ್ನ ವೆಬ್ಸೈಟ್ನಲ್ಲಿ ಒಂದು ವಾರದ ಮುಂಚೆಯೇ ಆರ್ಸಿಬಿ 4ನೇ ಸ್ಥಾನಕ್ಕೆ ಬರಲಿದೆ ಎಂದು ಹೇಳಿತ್ತು. ಈ ವೇಳೆ ಆರ್ಸಿಬಿಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದವು. ಈ ಎರಡೂ ಪಂದ್ಯಗಳನ್ನು ಗೆದ್ದು ಆರ್ಸಿಬಿ ಪ್ಲೇಆಫ್ ಪ್ರವೇಶಿಸಲಿದೆ ಎಂದು ಅಂದಾಜಿಸಿ ಜಿಯೋ ಸಿನಿಮಾದಲ್ಲಿ ಪ್ರಕಟಿಸಲಾಗಿತ್ತು.
ಸಂಶಯ ವ್ಯಕ್ತಪಡಿಸಿದ ಸಿಎಸ್ಕೆ ಅಭಿಮಾನಿಗಳು
ಆರ್ಸಿಬಿ ತಂಡವು ಕೊನೆಯ ಪಂದ್ಯದಲ್ಲಿ ಚೆನ್ನೈ ತಂಡವನ್ನು ಸೋಲಿಸುತ್ತದೆ ಎಂದು ಜಿಯೋ ಸಿನಿಮಾ ಭವಿಷ್ಯ ನುಡಿದಿತ್ತು. ಅದೇ ರೀತಿ ಬೆಂಗಳೂರು ತಂಡ ಚೆನ್ನೈ ತಂಡವನ್ನು ಮಣಿಸಿ ಪ್ಲೇ ಆಫ್ಗೆ ಲಗ್ಗೆ ಇಟ್ಟಿದೆ. ಆದರೆ, ಇದು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ. ಈ ಅಂದಾಜು ಪ್ರಕಟವಾದಾಗ ಚೆನ್ನೈ ತಂಡವು 4ನೇ ಸಂಭಾವ್ಯ ತಂಡವಾಗಿತ್ತು. ಆದರೆ, ಜಿಯೋ ಸಿನಿಮಾ ಚೆನ್ನೈ ಪ್ಲೇ ಆಫ್ ಸುತ್ತಿಗೆ ಮುನ್ನಡೆಯುವುದಿಲ್ಲ ಎಂದು ಭವಿಷ್ಯ ನುಡಿದಿತ್ತು.
ಇದೀಗ ಚೆನ್ನೈ ಅಭಿಮಾನಿಗಳು ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅಲ್ಲದೆ, ಐಪಿಎಲ್ ಅನ್ನು ಪೂರ್ವಯೋಜಿತವಾಗಿ ನಡೆಸಲಾಗುತ್ತಿದೆಯೇ, ಯಾವ ತಂಡಗಳು ಪ್ಲೇ ಆಫ್ಗೆ ಹೋಗುತ್ತವೆ ಎಂದು ಮೊದಲೇ ನಿರ್ಧರಿಸಲಾಗುತ್ತದೆಯೇ? ಎಂಬ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸೋಲಿನ ಹತಾಶೆಯಿಂದ ಚೆನ್ನೈ ಅಭಿಮಾನಿಗಳು ಈ ರೀತಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಅನೇಕರು ಕಾಮೆಂಟ್ ಮೂಲಕ ತಿರುಗೇಟು ನೀಡುತ್ತಿದ್ದಾರೆ. (ಏಜೆನ್ಸೀಸ್)
ಸಿಎಸ್ಕೆ ವಿರುದ್ಧ ಗೆದ್ದು ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಈಕೆಯೂ ಕಾರಣವಂತೆ! ಇಲ್ಲಿದೆ ವಿಡಿಯೋ ಸಾಕ್ಷಿ…
ಇದು ದೇವರೇ ಬರೆದ ಸ್ಕ್ರಿಪ್ಟ್! ಆರ್ಸಿಬಿಯ ಸೇಡಿನ ಕತೆ ಖಂಡಿತ ಯಶಸ್ವಿಯಾಗುತ್ತೆ, ಈ ಸಲ ಕಪ್ ನಮ್ದೆ
ನನಗೆ 18 ಅವರಿಗೆ 22 ವರ್ಷ ವಯಸ್ಸಷ್ಟೇ! ಖ್ಯಾತ ಹಾಸ್ಯನಟನ ಜತೆ ಮದ್ವೆ, ಟೀಕೆಗಳನ್ನು ಸಹಿಸದೆ ಕಣ್ಣೀರಿಟ್ಟ ನಟಿ