ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ದ್ಯಾಮವ್ವ ದುರಗವ್ವ ದೇವಿ ಪ್ರತಿಷ್ಠಾಪನೆ ನಿಮಿತ್ಯ ಬಳಗಾನೂರ ಶರಣ ಆಶಿರ್ವಚನ ಕಾರ್ಯಕ್ರಮ ಜರುಗಿತು.
ರೈತರು ಭಕ್ತಿಯಿಂದ ದೇವಿಯನ್ನು ಆರಾಧಿಸಿದರೆ ನಮ್ಮಲ್ಲಿರುವ ಕಷ್ಟಗಳು ದೂರವಾಗುತ್ತವೆ. ಗ್ರಾಮ ಮಳೆಬೆಳೆಯಿಂದ ಸಮೃದ್ಧಿಯಾಗುತ್ತದೆ. ಅಂಥ ಒಂದು ಭಕ್ತಿಯಕಾರ್ಯ ಈ ಗ್ರಾಮದ ಗುರು&ಹಿರಿಯರು ತಾಯಂದಿರು ಮಾಡಿದ್ದಾರೆ. ಇಂದು ಮನುಷ್ಯ ಅನೇಕ ಕೈಗಾರಿಕೆಗಳನ್ನು ಮಾಡಿ ಅನೇಕ ವಸ್ತುಗಳನ್ನು ಉತ್ಪಾದಿಸುತ್ತಿದ್ದಾನೆ. ಆದರೆ, ಕೈಗಾರಿಕೆಗಳಿಂದ ಆಹಾರ ಬೆಳೆಯಲು ಸಾಧ್ಯವಿಲ್ಲ. ರೈತ ಮಾತ್ರ ಅನ್ನ ಬೆಳೆಯಲು ಸಾಧ್ಯ. ಆ ನಿಟ್ಟಿನಲ್ಲಿ ಈ ಗ್ರಾಮದಲ್ಲಿ ಶ್ರೇಷ್ಠವಾದ ಭಕ್ತಿಯನ್ನು ಮಾಡುವುದರಿಂದ ಮುಕ್ತಿಯನ್ನು ಹೊಂದಲು ಸಾಧ್ಯವೆಂದು ಬಳಗಾನೂರ ಶರಣರು ಆಶಿರ್ವದಿಸಿದರು.
ಕಪ್ಪತ್ತ ಗುಡ್ಡದ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ಕೃಷಿ ಕುರಿತು ಮಾತನಾಡಿ, ಇಂದು ಈ ಬೆಳವಣಿಕಿ ಗ್ರಾಮದ ರೈತರು ಮೂಲ ಕೃಷಿಕರು. ಪ್ರಾಚಿನ ಕಾಲದಲ್ಲಿ ಇರುವಂತೆ ಈಗ ಹಗೆ ಕಟ್ಟುವ ಕಾರ್ಯ, ಬಿಸುವ ಸಲಕರಣೆ ಇಲ್ಲ. ಬದುಕು ಯಾಂತ್ರಿಕರಣಕ್ಕೆ ಕಾರಣವಾಗಿದೆ. ತಿಪ್ಪೆಗೊಬ್ಬರ ಇಲ್ಲದೇ ಇಂದು ಭೂಮಿ ವಿಷವಾಗಿ, ಅಂತ ಭೂಮಿಯಿಂದ ರಾಸಾಯನಿಕ ಗೊಬ್ಬರ ಬೆಳಸಿ ಆಹಾರ ಬೆಳೆಯುವದರಿಂದ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮರ ಇಲ್ಲ ಮಳೆ ಇಲ್ಲ, ಬೆಳೆ ಇಲ್ಲದಂತಾಗಿದೆ. ಮನುಷ್ಯ ನೌಕರಿ ಬೆನ್ನು ಹತ್ತಿದ್ದಾನೆ. ಕೃಷಿ ಉತ್ತಮ್ಮ, ವ್ಯಾಪಾರ ಮಧ್ಯಮ, ನೌಕರಿ ಕನಿಷ್ಠ, ಆದರೆ ಇಂದು ಎಲ್ಲವೂ ತದ್ವಿರುದ್ದವಾಗಿವೆ ಎಂದರು.
ಗಿನಿಗೇರಿ ಶ್ರೀಕಂಠ ಶ್ರೀಗಳು ದೇವಿಯ ಮಹತ್ವ ಭಕ್ತಿ ಕುರಿತು ಮಾತನಾಡಿದರು. ಸೋಮಶೇಖರ ಚರೇದ ಇದ್ದರು.