ದೇವದುರ್ಗ: ಗಬ್ಬೂರು ಗ್ರಾಮದಲ್ಲಿನ ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧದ ಮುಂದೆ ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ ಶನಿವಾರ ಪ್ರತಿಭಟನೆ ನಡೆಸಿತು.
ಹಾಸ್ಟೆಲ್ನಲ್ಲಿ ಮೂಲಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಸ್ಟೆಲ್ ವಾರ್ಡ್ನ್ ವಿಜಯಲಕ್ಷ್ಮೀಗೆ ಹಲವು ಸಲ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಹಾಸ್ಟೆಲ್ ಸುತ್ತಲೂ ಮುಳ್ಳಿನ ಬೇಲಿ ಬೆಳೆದಿದ್ದು, ವಿಷ ಜಂತುಗಳು ಒಳಗೆ ಬರುತ್ತಿವೆ. ಹಾಸ್ಟೆಲ್ ಕಿಟಕಿ, ಬಾಗಿಲು ಮುರಿದಿದ್ದು ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಾಸ್ಟೆಲ್ನಲ್ಲಿ ಇನ್ವರ್ಟರ್ ಇಲ್ಲದಿರುವುದರಿಂಧ ವಿದ್ಯುತ್ ಕಡಿತವಾದರೆ ವಿದ್ಯಾರ್ಥಿಗಳ ಓದಿಗೆ ಸಮಸ್ಯೆಯಾಗುತ್ತಿದೆ ಎಂದು ದೂರಿದರು.
ಹಾಸ್ಟೆಲ್ನಲ್ಲಿ ಕೂಡಲೇ ಮೂಲಸೌಲಭ್ಯ ಕಲ್ಪಿಸಬೇಕು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸದ ಹಾರ್ಡನ್ ವಿಜಯಲಕ್ಷ್ಮೀಯನ್ನು ಅಮಾನತು ಮಾಡಬೇಕು. ಹಾಸ್ಟೆಲ್ಗೆ ಇನ್ವರ್ಟರ್ ಅಳವಡಿಸಬೇಕು ಎಂದು ಒತ್ತಾಯಿಸಿದರು.