ಗಂಗಾವತಿ: ಭವಿಷ್ಯ ರೂಪಿಸಿಕೊಳ್ಳಲು ಅಧ್ಯಯನದೊಂದಿಗೆ ಜೀವನ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಿದೆ ಎಂದು ಬೆಥೆಲ್ ಕಾಲೇಜಿನ ಆಡಳಿತಾಧಿಕಾರಿ ಮತ್ತು ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಸಿ.ಐಗೋಳ ಸಲಹೆ ನೀಡಿದರು.
ನಗರದ ಬೆಥೆಲ್ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಜನ ಆರೋಗ್ಯ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ನೆಸ್ಸೆಸ್ ಘಟಕದಿಂದ ಶನಿವಾರ ಆಯೋಜಿಸಿದ್ದ ಜೀವನಕೌಶಲಗಳು ಮತ್ತು ಯುವ ಸ್ಪಂದನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಾಧನೆಗೆ ಅವಕಾಶಗಳು ಸಾಕಷ್ಟಿದ್ದು, ಕಲಿಕಾಸಕ್ತಿ ಮೂಲಕ ಉನ್ನತ ಗುರಿ ತಲುಪಬೇಕಿದೆ. ಸಾಧನೆಗೆ ಯಾವುದೂ ಅಸಾಧ್ಯವಲ್ಲ. ಆದರೆ, ಸಾಧಿಸುವ ಛಲ ಮತ್ತು ಅಸಕ್ತಿ ರೂಢಿಸಿಕೊಂಡರೆ ಭವಿಷ್ಯದಲ್ಲಿ ಸಾಧನೆಗೆ ಹಾದಿ ಸುಲಭವಾಗಲಿದೆ ಎಂದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಕೆ.ಹನುಮಂತಪ್ಪ ಮಾತನಾಡಿ, ವಿದ್ಯಾರ್ಥಿಗಳು ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕಿದ್ದು, ನಿರಂತರ ಚಟುವಟಿಕೆಗಳ ಮೂಲಕ ನಿರೀಕ್ಷಿತ ಗುರಿ ತಲುಪುವಂತೆ ಸಲಹೆ ನೀಡಿದರು. ಜೀವನ ಕೌಶಲಗಳ ಕುರಿತು ಮಾಹಿತಿ ನೀಡಲಾಯಿತು.
ಯುವ ಸ್ಪಂದನ ಪ್ರವರ್ತಕರಾದ ನಾಗರಾಜ್ ಪೂಜಾರ್, ಮೈಲಾರಪ್ಪ, ಪ್ರತಿಭಾ ಪೊ.ಪಾಟೀಲ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬೆಜ್ಲಿಯಲ್ ಜೋಸ್ೆರಾಜು, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಪ್ರಾಚಾರ್ಯ ಬಿಂಗಿ ವೆಂಕಟೇಶ, ಉಪನ್ಯಾಸಕರಾದ ಸುಜಾತಾ, ಶ್ರೀದೇವಿ ತಟ್ಟಿ, ಶಿಲ್ಪಾ ಇತರರಿದ್ದರು.