ಬೆಳಗಾವಿ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರಕ್ಕಾಗಿ ವಿಶ್ವ ಹಿಂದು ಪರಿಷತ್ ವತಿಯಿಂದ ದೇಶವ್ಯಾಪಿ ಜ.15ರಿಂದ ಫೆ. 27ರ ವರೆಗೆ ನಿಧಿ ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿಎಚ್ಪಿ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದ ನಾಲ್ಕುವರೆ ಲಕ್ಷ ಗ್ರಾಮ ಸಂಪರ್ಕಿಸಿ ಸುಮಾರು 11 ಕೋಟಿ ಮನೆಗಳಿಗೆ ಅಯೋಧ್ಯೆಯ ಹೋರಾಟದ ಇತಿಹಾಸದ ಕರಪತ್ರ ಹಂಚಲಾಗುವುದು. ಅಲ್ಲದೆ, ಜನರಿಂದ ಕಾಣಿಕೆ ಸಂಗ್ರಹಿಸಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ಗೆ ವಿತರಿಸಲಾಗುವುದು ಎಂದರು.
ಬೆಳಗಾವಿ ಜಿಲ್ಲೆಯ 800 ಹಾಗೂ ಚಿಕ್ಕೋಡಿ ಜಿಲ್ಲೆಯ 600 ಗ್ರಾಮಗಳಲ್ಲಿ ನೆಲೆಸಿರುವ ಸುಮಾರು 10 ಲಕ್ಷ ಕುಟುಂಬಗಳನ್ನು ಸಂಪರ್ಕಿಸುವ ಸಂಕಲ್ಪ ಮಾಡಲಾಗಿದೆ. ಮುದ್ರಿತ ಕೂಪನ್ಗಳ ಮೂಲಕ 10, 50, 100, 1000 ರೂ. ನಿಧಿ ಸಂಗ್ರಹಿಸಲಾಗುವುದು. ಇದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸುವ ಭಕ್ತರಿಗೆ ರಶೀದಿ ನೀಡಲಾಗುವುದು. ಜತೆಗೆ ಅವರು ಭಾರತೀಯ ಆದಾಯ ತೆರಿಗೆ ಕಾಯ್ದೆ 80ಜಿ ಅಡಿ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಬಹುದು ಎಂದು ಮಾಹಿತಿ ನೀಡಿದರು. ವಿಎಚ್ಪಿಯ ಕರ್ನಾಟಕ ಉತ್ತರ ಪ್ರಾಂತೀಯ ಸಂಘಟನಾ ಮಂತ್ರಿ ಮನೋಹರ ಮಠದ, ರಾಮ ಮಂದಿರ ನಿಧಿ ಸಮರ್ಪಣಾ ರಾಜ್ಯ ಸಮಿತಿ ಸದಸ್ಯ ಜಯಂತ ಹುಂಬರವಾಡಿ, ಕರ್ನಾಟಕ ಉತ್ತರ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣ ಭಟ್, ವಿಎಚ್ಪಿ ಮುಖಂಡರಾದ ಶ್ರೀಕಾಂತ ಕದಂ, ಆರ್.ಕೆ. ಭಾಗಿ ಇತರರಿದ್ದರು.