ತೆಲಸಂಗ: ಬಸವಾದಿ ಶರಣರ ವಿಚಾರಗಳನ್ನು ಜೀವಂತವಾಗಿಡುವ ಕೆಲಸ ಮಾಡಿದ್ದು ಲಿಂಗಾಯತ ಧರ್ಮದಲ್ಲಿನ ಬಣಿಜಗ ಸಮುದಾಯ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.
ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಂಗಲ ಕಾರ್ಯಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತಕ್ಕೆ ಜಗತ್ತಿನಲ್ಲಿ ವಿಶೇಷವಾದ ಗೌರವ ಸಿಗುತ್ತಿರುವುದು ಬಸವಾದಿ ಶರಣರ ಲಿಂಗಾಯತ ಸಮುದಾಯದಿಂದ. ಪಾಲಕರು ಮಕ್ಕಳಿಗೆ ಕನಿಷ್ಠ ಪದವಿವರೆಗಾದರೂ ಶಿಕ್ಷಣ ಕೊಡಿಸಬೇಕು ಎಂದರು.
ಶಿರಹಟ್ಟಿ ಜಗದ್ಗುರು ಕೀರ ಸಿದ್ಧರಾಮ ಶ್ರೀಗಳು ಮಾತನಾಡಿ, ಸಮಾಜದಲ್ಲಿ ಸಾಮರಸ್ಯ, ನಿಸ್ವಾರ್ಥ ಮತ್ತು ಆಂತರಿಕ ಪರಿಶುದ್ಧತೆ ಇರುವುದರಿಂದಲೇ ಮಂಗಲ ಕಾರ್ಯಾಲಯ ನಿರ್ಮಾಣವಾಗಿದೆ. ಸಾಮೂಹಿಕ ವಿವಾಹ ಕಾರ್ಯ ಶ್ಲಾಘನೀಯ ಎಂದರು.
ರೋಳದ ಶಂಕರಾರೂಢ ಸ್ವಾಮೀಜಿ ಮಾತನಾಡಿ, ಸಮಾಜಮುಖಿ ಸೇವೆಯಲ್ಲಿ ಶ್ರೇಷ್ಠತೆ ಕಂಡುಕೊಳ್ಳಬೇಕು ಎಂದರು. ಹೊನವಾಡದ ಬಾಬುರಾವ ಮಜಹಾರಾಜರು ಮಾತನಾಡಿದರು. ಅಥಣಿ ಶೆಟ್ಟರಮಠದ ಮರುಳಸಿದ್ದ ಶ್ರೀಗಳು, ಹಿರೇಮಠದ ವೀರೇಶ್ವರ ದೇವರು, ಮುಖಂಡರು ಹಾಗೂ ಗಣ್ಯರು ಇದ್ದರು.