ಮೈಸೂರು: ಸಂಸದೆ ಸುಮಲತಾ ಅವರಿಗೆ ಗುದ್ದಲಿ ಪೂಜೆಗೂ ಅವಕಾಶ ನೀಡದೆ ಶಾಸಕ ಸಾ.ರಾ. ಮಹೇಶ್ ಅವರ ಬೆಂಬಲಿಗರು ಅಡ್ಡಿಪಡಿಸಿದ್ದಲ್ಲದೆ, ಒಮ್ಮೆ ಸಂಘರ್ಷ ತಾರಕಕ್ಕೇರಿದ ಪ್ರಸಂಗವೂ ನಡೆಯಿತು.
ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕು ಮುಂಜನಹಳ್ಳಿಯಲ್ಲಿ ಕಾಮಗಾರಿಯೊಂದರ ಗುದ್ದಲಿ ಪೂಜೆಗೆ ಸಂಸದೆ ಸುಮಲತಾ ಬಂದಿದ್ದಾಗ ಈ ಪ್ರಕರಣ ನಡೆಯಿತು. ಶಾಸಕ ಸಾ.ರಾ. ಮಹೇಶ್ ಅವರನ್ನು ಬಿಟ್ಟು ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ಗಲಾಟೆ ನಡೆಯಿತು.
ಗುದ್ದಲಿ ಪೂಜೆಗೆ ಬಂದಿದ್ದ ಮಂಡ್ಯ ಸಂಸದೆಗೆ ಜೆಡಿಎಸ್ ಕಾರ್ಯಕರ್ತರು ತಡೆಯೊಡ್ಡಿದರು. ಗುದ್ದಲಿ ಪೂಜೆ ನಡೆಸಲೂ ಬಿಡದೆ ಗಲಾಟೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ-ಸಂಸದರ ಬೆಂಬಲಿಗರು ಪರಸ್ಪರ ಧಿಕ್ಕಾರ ಕೂಗಿದರು. ಶಾಸಕರ ಬೆಂಬಲಿಗರು ಶಾಮಿಯಾನ ಕಿತ್ತು ಹಾಕಿ ಗಲಾಟೆ ಮಾಡಿದರು. ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತು.
ಆದರೆ ಸ್ಥಳೀಯ ಮಹಿಳೆಯರು ತಾವೇ ಖುದ್ದು ನಿಂತು ಸಂಸದೆ ಸುಮಲತಾ ಕೈಯಲ್ಲಿ ಗುದ್ದಲಿಪೂಜೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಮೂಕಪ್ರೇಕ್ಷಕರಂತೆ ನಿಂತು ನೋಡುವಂಥ ಪ್ರಸಂಗವೂ ಕಂಡುಬಂತು.