ಮೈಸೂರು : ಡೀಡ್ ಸಂಸ್ಥೆ, ಸದೃಢ ಚಾರಿಟಬಲ್ ಟ್ರಸ್ಟ್ ಮತ್ತು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ 142 ಜನರು ತಪಾಸಣೆಗೊಳಗಾದರೆ, ಈ ಪೈಕಿ 71 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ತಾಲೂಕಿನಲ್ಲಿ ಆಯೋಜನೆಗೊಂಡಿರುವ 25ನೇ ಶಿಬಿರ ಇದಾಗಿದ್ದು, ನೂರಾರು ಜನರು ಮುಖ್ಯವಾಗಿ ಆದಿವಾಸಿ ಗಿರಿಜನರು ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ. ಜನರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಂಕರ ಕಣ್ಣಿನ ಆಸ್ಪತ್ರೆಯ ಕಾರ್ಯಕ್ರಮ ಸಂಯೋಜಕ ಶೀಕಂಠಮೂರ್ತಿ ಮಾತನಾಡಿ, ಪ್ರತಿ ತಿಂಗಳ ಮೂರನೇ ಬುಧವಾರದಂದು ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಶಿಬಿರ ಆಯೋಜಿಸಲಾಗುತ್ತಿದ್ದು, ಏಪ್ರಿಲ್ 16 ರಂದು ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸದೃಢ ಚಾರಿಟಬಲ್ ಟ್ರಸ್ಟ್ನ ಮಂಜುನಾಥ್ ಮಾತನಾಡಿ, ಈ ಹಿಂದೆ ತಪಾಸಣೆಗೊಳಗಾದವರ ಪೈಕಿ 45 ಜನರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಡಾ.ಸಾಗರೀಕ, ಬುಡಕಟ್ಟು ಕೃಷಿಕರ ಸಂಘದ ಪಿ.ಕೆ.ರಾಮು, ರಕ್ಷಿತಾ, ಜಿ.ಎಸ್.ಉಷಾ, ಮೋಹನಾ ಕುಮಾರ್, ಸುನಿಲ್, ಅಜಯ್ಕುಮಾರ್ ಇತರರು ಹಾಜರಿದ್ದರು.