ಬೆಂಗಳೂರು: ರಾತ್ರಿ ವೇಳೆ ದಾರಿಹೋಕರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
ಎಚ್ಬಿಆರ್ ಲೇಔಟ್ ವಿನೋಬನಗರದ ರವಿ ಕುಮಾರ್ (24), ಗಂಗಾನಗರದ ಅಮೀನ್ (30), ಎಚ್ಬಿಆರ್ ಲೇಔಟ್ನ ಪ್ರಶಾಂತ್ (24) ಹಾಗೂ ಅರಾಫತ್ (28) ಬಂಧಿತರು. 1.60 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನ ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗೇನಹಳ್ಳಿಯ ಭರಾದಿಯಾ ಸಿಟಿ ನಿವಾಸಿ ಮಹಮದ್ ಫಾದಲ್ ಫಿರ್ದೊಜ್ ಮತ್ತು ಸ್ನೇಹಿತ ನಶೀಮ್, ಅ.28ರ ರಾತ್ರಿ 10.50ರಲ್ಲಿ ದ್ವಿಚಕ್ರ ವಾಹನದಲ್ಲಿ ವೈಟ್ಫೀಲ್ಡ್ ಮುಖ್ಯರಸ್ತೆಯ ನೆಟ್ ಆ್ಯಪ್ ಕಂಪನಿ ಬಳಿ ಬರುತ್ತಿದ್ದರು.
ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು ವಿಳಾಸ ಕೇಳುವ ನೆಪದಲ್ಲಿ ಮಹಮದ್ ಫಾದಲ್, ಬೈಕ್ನ್ನು ಅಡ್ಡಗಟ್ಟಿದ್ದಾರೆ. ಬಳಿಕ ಏಕಾಏಕಿ ಚಾಕು ತೆಗೆದು ಫಾದಲ್ಗೆ ಹೆದರಿಸಿ ದ್ವಿಚಕ್ರ ವಾಹನ, ಮೊಬೈಲ್, ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಅಪರಾಧ ಹಿನ್ನೆವುಳ್ಳವರಾಗಿದ್ದು, ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.