ಉಳ್ಳಾಲ(ದ.ಕ): ಜಲಜೀವನ ಮಿಷನ್ನಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಮನೆಗಳಿಗೆ ನೀರು ಪೂರೈಕೆಯಾಗಲಿದೆ. ಎಲ್ಲ ವಸತಿ ಪ್ರದೇಶಗಳು ಹಾಗೂ ಅಭಿವೃದ್ಧಿ ಹೊಂದಲಿರುವ ಜಂಕ್ಷನ್ಗಳಿಗೆ ಉಪಯುಕ್ತವಾಗಲಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಕೊಣಾಜೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 3.83 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಶುದ್ಧ ಕುಡಿಯುವ ನೀರಿನ ಯೋಜನೆಗೆ ಅಸೈಗೋಳಿ ಅಂಗನವಾಡಿ ಬಳಿ ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಎರಡನೇ ಹಂತದ ಯೋಜನೆ ಅಂತಿಮ ಹಂತದಲ್ಲಿದ್ದು ಶೀಘ್ರ ಅನುಷ್ಠಾನಗೊಳ್ಳಲಿದೆ. ಪ್ರತಿ ಮನೆಗೆ ಪೈಪ್ಲೈನ್ ಹಾಗೂ ಜಂಕ್ಷನ್ಗಳಲ್ಲಿ ಟ್ಯಾಂಕ್ ನಿರ್ಮಾಣಗೊಳ್ಳಲಿದೆ ಎಂದರು.
ವಲಯ ಕಾಂಗ್ರೆಸ್ ಅಧ್ಯಕ್ಷ ದೇವಣ್ಣ ಶೆಟ್ಟಿ ಕಾಮಗಾರಿಗೆ ಶಿಲಾನ್ಯಾಸಗೈದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂಚಲಾಕ್ಷಿ, ಪ್ರಧಾನ ಕಾರ್ಯದರ್ಶಿ ಖಲೀಲ್ ಪಟ್ಟೊರಿ, ವಾರ್ಡ್ ಅಧ್ಯಕ್ಷ ಸುನಿಲ್ ಪೂಜಾರಿ,ಪಂಚಾಯಿತಿ ಸದಸ್ಯೆ ರುಕಿಯಾ, ಮಾಜಿ ಅಧ್ಯಕ್ಷ ಅಚ್ಯುತ ಗಟ್ಟಿ, ರೆಹಮಾನ್ ಕೋಡಿಜಾಲ್, ಮೆಗಾ ಸಲೀಂ, ಇಕ್ಬಾಲ್ ಸಾಮಣಿಗೆ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ ಕಾರ್ಯಕ್ರಮ ನಿರೂಪಿಸಿದರು.