ನವದೆಹಲಿ: ದೀರ್ಘಕಾಲದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತೇರಿ ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಪರಿಸರವಾದಿ ಆರ್.ಕೆ.ಪಚೌರಿ(79) ಅವರು ಗುರುವಾರ ರಾತ್ರಿ ಸಾವಿಗೀಡಾಗಿದ್ದಾರೆ.
ಆರ್.ಕೆ.ಪಚೌರಿ ಮೃತರಾಗಿರುವ ವಿಚಾರವನ್ನು ತೇರಿ ಸಂಸ್ಥೆಯ ಮಹಾನಿರ್ದೇಶಕರಾದ ಅಜಯ್ ಮಥೂರ್ ಅವರು ಗುರುವಾರ ರಾತ್ರಿ ಖಚಿತಪಡಿಸಿದ್ದಾರೆ.
ತೇರಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಆರ್.ಕೆ. ಪಚೌರಿ ಅವರನ್ನು ಕಳೆದುಕೊಂಡಿದ್ದೇವೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ. ಇಂತಹ ದುಃಖದ ಸಂದರ್ಭದಲ್ಲಿ ಇಡೀ ತೇರಿ ಕುಟುಂಬ ಪಚೌರಿ ಅವರು ಕುಟುಂಬದೊಂದಿಗೆ ನಿಲ್ಲುತ್ತದೆ ಎಂದು ತೇರಿ ಸಂಸ್ಥೆ ತನ್ನ ಟ್ವಿಟರ್ನಲ್ಲಿ ಬರೆದುಕೊಂಡಿದೆ.
ತೇರಿ ಸಂಸ್ಥೆ ಇಂದು ಏನಾಗಿದೆ ಎಂದರೆ ಅದಕ್ಕೆ ಪಚೌರಿ ಅವರ ನಿರಂತರ ಪರಿಶ್ರಮವೇ ಕಾರಣ. ಸಂಸ್ಥೆಯನ್ನು ಮುನ್ನಡೆಸಿ ಸುಸ್ಥಿರ ಸ್ಥಳಕ್ಕೆ ಕೊಂಡೊಯ್ಯುವಲ್ಲಿ ಪಚೌರಿ ಅವರ ಪಾತ್ರ ಪ್ರಮುಖವಾಗಿದೆ ಎಂದು ಅಜಯ್ ಮಥೂರ್ ಹೇಳಿದ್ದಾರೆ. 2015ರಲ್ಲಿ ಪಚೌರಿ ಅವರಿಂದ ತೆರವಾದ ಮಹಾನಿರ್ದೇಶಕ ಸ್ಥಾನಕ್ಕೆ ಅಜಯ್ ಮಥೂರ್ ನೇಮಕವಾದರು.
ಜಾಗತಿಕ ಸುಸ್ಥಿರ ಬೆಳವಣಿಗೆಗೆ ಪಚೌರಿ ಅವರ ಕೊಡಗೆಗೆ ಸಾಟಿಯಿಲ್ಲ. ಹವಮಾನ ಬದಲಾವಣೆಯ ಅಂತರಸರ್ಕಾರಿ ಸಮಿತಿಯಲ್ಲಿನ ಇವರ ನಾಯಕತ್ವದಿಂದಾಗಿ ಇಂದು ಹವಾಮಾನ ಬದಲಾವಣೆ ಮೇಲಿನ ಚರ್ಚೆಗೆ ಅಡಿಗಲ್ಲು ಹಾಕಿದಂತಾಗಿದೆ ಎಂದು ತೇರಿ ಸಂಸ್ಥೆಯ ಚೇರ್ಮನ್ ಹೇಳಿದ್ದಾರೆ.
ಪಚೌರಿ ಅವರು ನವದೆಹಲಿಯ ಎಸ್ಕಾರ್ಟ್ ಹಾರ್ಟ್ ಸಂಸ್ಥೆಗೆ ಬಹು ದಿನಗಳ ಹಿಂದೆಯೇ ದಾಖಲಾಗಿದ್ದರು. ಅವರನ್ನು ಮಂಗಳವಾರ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್)