ಗಂಗಾವತಿ: ಶೈಕ್ಷಣಿಕ ಪ್ರಮಾಣ ಹೆಚ್ಚಳಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕಿದ್ದು, ಸರ್ಕಾರಿ ಶಾಲೆಗಳ ಮಕ್ಕಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಮಾಜಿ ಶಾಸಕ ಪರಣ್ಣಮುನವಳ್ಳಿ ಹೇಳಿದರು.
ನಗರದ ಕಲ್ಮಠ ಪುರಾಣ ಮಂಟಪದಲ್ಲಿ ಜೆಎನ್ಎನ್ ಸೇವಾಬಳಗದಿಂದ ಸೋಮವಾರ ಆಯೋಜಿಸಿದ್ದ ಸರ್ಕಾರಿ ಶಾಲೆ ಮಕ್ಕಳಿಗೆ ನೋಟಬುಕ್ ಮತ್ತು ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಕ್ಷರ ಕಲಿತರೇ ಸಂವಿಧಾನದ ಹಕ್ಕುಗಳನ್ನುಪಡೆಯಲು ಸಾಧ್ಯವಿದ್ದು, ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಿಸಬೇಕಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಕೃಷಿ ಮತ್ತು ಇಂಜಿನಿಯರಿಂಗ್ ಕಾಲೇಜು ಆರಂಭಿಸುವ ಮೂಲಕ ಶಿಕ್ಷಣಕ್ಕೆ ಮಹತ್ವ ನೀಡಲಾಗಿತ್ತು ಎಂದರು.
ಜೆಎನ್ಎನ್ ಸೇವಾ ಬಳಗದ ಮುಖ್ಯಸ್ಥ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ನಗರ ಮತ್ತು ತಾಲೂಕಿನ 20 ಸರ್ಕಾರಿ ಶಾಲೆಗಳಿಗೆ 5 ಸಾವಿರಕ್ಕೂ ಹೆಚ್ಚು ನೋಟ್ಬುಕ್ಗಳನ್ನು ವಿತರಿಸಲಾಗುತ್ತಿದ್ದು, ಬಡ ಮಕ್ಕಳ ಕಲಿಕೆಗೆ ಯಾವುದೇ ಕೊರತೆಯಾಗದಂತೆ ಕಲಿಕಾ ಸಾಮಗ್ರಿ ವಿತರಿಸಲಾಗುವುದು. 13 ವರ್ಷಗಳಿಂದ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಕಲ್ಲುಮಠದ ಡಾ.ಕೊಟ್ಟೂರು ಸ್ವಾಮೀಜಿ, ಮಾಜಿ ಶಾಸಕ ಜಿ.ವೀರಪ್ಪ, ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಮುಖ್ಯಸ್ಥ ನೆಕ್ಕಂಟಿ ಸೂರಿಬಾಬು, ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ಗ್ರಾಮೀಣ ಪಿಐ ಎಸ್.ಮಂಜುನಾಥ, ನಗರ ಪಿಐ ಅಡಿವೇಶ ಗುದಿಗೊಪ್ಪ, ಬಿಇಒ ಸೋಮಶೇಖರಗೌಡ ತಿಪ್ಪನಾಳ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ನಯೋಪ್ರಾ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ನಗರಸಭೆ ಮಾಜಿ ಅಧ್ಯಕ್ಷರಾದ ಕೆ.ವೆಂಕಟೇಶ, ಜೋಗದ ಹನುಮಂತಪ್ಪ ನಾಯಕ, ಸದಸ್ಯ ಶಾಮೀದ್ ಮನಿಯಾರ್ ಇದ್ದರು.