ಹುಮನಾಬಾದ್: ಅನಿಲ ಸೋರಿಕೆಯಿಂದ ಇಬ್ಬರು ಯುವ ಕಾರ್ಮಿಕರು ಮೃತಪಟ್ಟಿರುವುದನ್ನು ಗಂಭೀರ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದ ಕೆಮಿಕಲ್ಸ್ ಕಾರ್ಖಾನೆಯೊಂದರಲ್ಲಿ ಗ್ಯಾಸ್ ಸೋರಿಕೆಯಿಂದ ಇಬ್ಬರು ಮೃತಪಟ್ಟಿದ್ದರಿಂದ ಗುರುವಾರ ಅಧಿಕಾರಿಗಳ ಜತೆ ಅಲ್ಲಿಗೆ ತೆರಳಿ ಮಾಹಿತಿ ಪಡೆದ ಅವರು, ಕಾರ್ಖಾನೆಯವರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಅಧಿಕಾರಿಗಳು ಎಲ್ಲ ಕಾರ್ಖಾನೆಗಳಲ್ಲಿ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಮಾತನಾಡಿ, ಮುಂದೆ ಇಂತಹ ಘಟನೆ ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದರು.
ತಹಸೀಲ್ದಾರ್ ಅಂಜುಂ ತಬಸ್ಸುಮ್, ಗ್ರೇಡ್-೨ ತಹಸೀಲ್ದಾರ್ ಮಂಜುನಾಥ ಪಂಚಾಳ, ಸಿಪಿಐ ಗುರು ಪಾಟೀಲ್, ಪಿಡಿಒ ಹಣಮಂತ ಕಡಕೋಳ ಇತರರಿದ್ದರು.