ಕಾರವಾರ: ಬ್ರಾಹ್ಮಣ ಮಹಾಸಭಾದ “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಘೋಷ ವಾಕ್ಯ ಜೆಡಿಎಸ್ನದ್ದೂ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಗೋಕರ್ಣ ಮಹಾಬಲೇಶ್ವರ ದೇವರ ದರ್ಶನ ಪಡೆದು ಪಂಚರತ್ನ ಯಾತ್ರೆ ಆರಂಭಿಸಿದ ಅವರು ಮಾಧ್ಯಮದ ಪ್ರತಿನಿಧಿಗಳ ಜತೆ ಮಾತನಾಡುತ್ತಾ, ಬ್ರಾಹ್ಮಣ ಮಹಾಸಭಾಕ್ಕೆ ಜಾಗ ಕೊಟ್ಟವನೇ ನಾನು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆ ಮಾಡಿ ಅದಕ್ಕೆ 5 ಕೋಟಿ ಮಂಜೂರು ಮಾಡಿದವ ನಾನೇ. ಬಿಜೆಪಿ ಮಂಡಳಿಗೆ ಎಷ್ಟು ಹಣ ಕೊಟ್ಟಿದೆ ಎಂದು ಬಹಿರಂಗ ಮಾಡಲಿ ಎಂದರು.
ಸಾವರ್ಕರ್, ಟಿಪ್ಪು ಸಿದ್ಧಾಂತಗಳ ನಡುವಿನ ಚುನಾವಣೆ ಎಂಬುದು ಕಾಂಗ್ರೆಸ್ ಹಾಗೂ ಬಿಜೆಪಿ ಬಿಟ್ಟ ವಿಚಾರ ಎಂದರು. ನಮ್ಮದು ಸಾವರ್ಕರ್ ಡಿಎನ್ಎ ಅಲ್ಲ. ನಮಗೆ ಸಾವರ್ಕರ್ ಸಂಸ್ಕೃತಿ ಬೇಡ. ಸರ್ವೇ ಜನಃ ಸುಖಿನೋಭವಂತು ಅನ್ನುವ ಬ್ರಾಹ್ಮಣರು ನಮಗೆ ಬೇಕು ಎಂದು ಹೇಳಿದರು.
ನಾವು ಬ್ರಾಹ್ಮಣ ವಿರೋಧಿಯಲ್ಲ ಎಂದು ಸ್ಪಷ್ಟ ಪಡಿಸಿದ ಕುಮಾರಸ್ವಾಮಿ, ರಾಮಕೃಷ್ಣ ಹೆಗಡೆ ಅವರನ್ನು ರಾಜ್ಯ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ದೇವೆಗೌಡರು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ಹೊರಹಾಕಿದ ಕುಮಾರಸ್ವಾಮಿ, ಕಟೀಲ್ಗೆ ರಾಜಕೀಯ ಎಲ್ಲಿ ಗೊತ್ತಿದೆ. ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಹೆಸರು ಇಟ್ಟುಕೊಳ್ಳಲಿ. ನಾವು ಈ ಬಾರಿಯ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ಲುತ್ತೇವೆ ಎನ್ನುವುದನ್ನು ಜನರು ನಿರ್ಧರಿಸುತ್ತಾರೆ. ಬಿಜೆಪಿ ನಾಯಕರು ನಿರ್ಧರಿಸುವುದಲ್ಲ. ಹಿಂದು ಧರ್ಮದ ರಕ್ಷಣೆ ನಾವು ಮಾಡುತ್ತೇವೆ. ಹಿಂದು ಧರ್ಮದ ಹೆಸರಿನಲ್ಲಿ ಅಧಿಕಾರ ಬಂದವರು ಏನು ಮಾಡಿದ್ದಾರೆ ಎನ್ನುವುದು ತಿಳಿದಿದೆ ಎಂದು ಹೇಳಿದರು.