More

    ದೇವದಾಸಿಯರಿಗೆ ಸರ್ಕಾರ ನಿವೇಶನ ಕಲ್ಪಿಸಲಿ

    ಚಿಕ್ಕೋಡಿ: ತಂದೆಯ ಹೆಸರನ್ನು ಕಡ್ಡಾಯಗೊಳಿಸಿದ್ದರಿಂದ ಬ್ಯಾಂಕ್ ಅಕೌಂಟ್ ತೆರೆಯುವುದು ಸೇರಿ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವಾಗ ದೇವದಾಸಿಯರ ಮಕ್ಕಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸರ್ಕಾರ ಇದನ್ನು ಕೈಬಿಡಬೇಕು ಅಮ್ಮಾ ಫೌಂಡೇಷನ್ ಕಾರ್ಯದರ್ಶಿ ಶೋಭಾ ಗಸ್ತಿ ಹೇಳಿದರು.

    ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಚಿಲ್ಡ್ರ್‌ನ್ ಆಫ್ ಇಂಡಿಯಾ ಫೌಂಡೇಷನ್, ಅಮ್ಮಾ ಫೌಂಡೇಷನ್ ಸಹಯೋಗದಲ್ಲಿ ಚಿಲ್ಡ್ರನ್ ಗುಡ್ ಯೋಜನೆ ವತಿಯಿಂದ ದೇವದಾಸಿ ಮಹಿಳೆಯರು ಹಾಗೂ ಮಕ್ಕಳ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಹೊರಡಿಸಿದ ಆದೇಶಗಳ ಮಾಹಿತಿ ಹಂಚಿಕೆ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವದಾಸಿಯರಿಗೆ ನಿವೇಶನ ನೀಡಬೇಕು ಎಂದರು.

    ಕಾರ್ಯಾಗಾರ ಉದ್ಘಾಟಿಸಿದ ಪತ್ರಕರ್ತ ಚಂದ್ರಶೇಖರ ಎಸ್. ಚಿನಕೇಕರ ಮಾತನಾಡಿ, ಅನಿಷ್ಠ ಪದ್ಧತಿ ತಡೆಯಲು ದೇವದಾಸಿಯರಿಗೆ ಯೋಜನೆಗಳನ್ನು ಕಲ್ಪಿಸಬೇಕು ಹಾಗೂ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಬೆಳಗಾವಿ ಜಿಲ್ಲೆ ಸೇರಿ ರಾಜ್ಯದಲ್ಲಿ ಸಹಸ್ರಾರು ದೇವದಾಸಿಯರು ಸರ್ಕಾರ ನಡೆಸಿದ ಸಮೀಕ್ಷೆಯಿಂದ ಹೊರಗುಳಿದಿದ್ದು, ಅವರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದರು.

    ದೇವದಾಸಿ ಸೇವಾ ಸಂಸ್ಥೆಯ ಅಧ್ಯಕ್ಷೆ ನಿಂಗವ್ವ ಕಾಂಬಳೆ ಮಾತನಾಡಿ, ದೇವದಾಸಿಯರ ಮಾಸಿಕ ಪಿಂಚಣಿಯನ್ನು 5 ಸಾವಿರ ರೂ.ಗೆ ಹೆಚ್ಚಿಸಬೇಕು. ಅವರ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದರು. ಸಂಸ್ಥೆ ಹೊರತಂದ ಜನಪರ ವಕಾಲತ್ತು ಫಲಿತಾಂಶಗಳು ಎಂಬ ಕಿರು ಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ಮೇಘನಾ ಮಾದರ, ಅಕ್ಷತಾ ಸನದಿ, ಪ್ರಿಯಾಂಕಾ ಕಾಂಬಳೆ, ಶ್ರಾವಣಿ ದೊಡಮನಿ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು.

    ಗುಡ್ ಯೋಜನೆಯ ಸಂಯೋಜಕಿ ಮಂಜುಳಾ ಹರಿಜನ ಪ್ರಾಸ್ತಾವಿಕ ಮಾತನಾಡಿದರು. ಮೂಡಲಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಿರೆನ್ನವರ, ಕಾಂಚನಾ ಮೇತ್ರಿ, ಲಕ್ಷ್ಮೀ ಹತ್ತರಕಿ, ಪತ್ರಕರ್ತರಾದ ರಾಜು ಸಂಕೇಶ್ವರಿ, ಮಹಾದೇವ ಪೂಜೇರಿ, ಕಾಶಿನಾಥ ಸುಳಕುಡೆ, ರವಿ ಮಂಗಾವೆ, ಡಿ.ಕೆ. ಉಪ್ಪಾರ, ಲಾಲಸಾಬ ತಟಗಾರ, ಮಹಾಂತೇಶ ಮಠಪತಿ, ವೆಂಕಟೇಶ ಬಾಲರೆಡ್ಡಿ, ಭೀಮಶಿ ತಳವಾರ, ಸಂಜೀವ ಕಾಂಬಳೆ, ಈಶ್ವರ ಢವಳೇಶ್ವರ ಇದ್ದರು. ಸುಜಾತಾ ಕೆಳಗಡೆ ಸ್ವಾಗತಿಸಿದರು. ಸರಿತಾ ಗಸ್ತಿ ನಿರೂಪಿಸಿದರು. ಯಲ್ಲಪ್ಪ ಮಾದರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts