ರಾಣೆಬೆನ್ನೂರ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಬಲ ನೀಡಿ ಆಡಳಿತ ಅನುಕೂಲ ಕಲ್ಪಿಸಲು ಪ್ರತಿ ತಾಲೂಕುಗಳಿಗೂ ಉಸ್ತುವಾರಿ ಅಧಿಕಾರಿಗಳನ್ನು ಸರ್ಕಾರ ನೇಮಿಸಿದ್ದು, ಜಿಲ್ಲೆಯಲ್ಲಿ ಸದ್ಯ 3 ತಾಲೂಕು ಹೊರತುಪಡಿಸಿ ಉಳಿದೆಲ್ಲ 5 ತಾಲೂಕುಗಳಿಗೆ ಉಸ್ತುವಾರಿ ಅಧಿಕಾರಿ ನೇಮಕವಾಗಿದೆ.
ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಎಲ್ಲ ತಾಲೂಕುಗಳಿಗೂ ತಲಾ ಒಬ್ಬರು ಕೆಎಎಸ್ ಅಧಿಕಾರಿಗೆ ತಾಲೂಕು ಉಸ್ತುವಾರಿ ಹೊಣೆಗಾರಿಕೆ ನೀಡಲಾಗಿದೆ.
ಉಸ್ತುವಾರಿಗಳ ಜವಾಬ್ದಾರಿ ಏನು…?
ಗ್ಯಾರಂಟಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಸೇರಿ 13 ಪ್ರಮುಖ ಜವಾಬ್ದಾರಿಗಳನ್ನು ತಾಲೂಕು ಉಸ್ತುವಾರಿ ನಿಭಾಯಿಸಬೇಕು. ಉಸ್ತುವಾರಿ ಅಧಿಕಾರಿಗಳು ಗ್ಯಾರಂಟಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದ ಪರಿಶೀಲನೆ, ವಿದ್ಯಾರ್ಥಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲನೆ, ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ಹಾಗೂ ಮೂಲಸೌಕರ್ಯಗಳ ಪರಿಶೀಲನೆ ನಡೆಸಬೇಕು.
ಅಂಗನವಾಡಿಗಳಿಗೆ ನಿವೇಶನ ಒದಗಿಸುವುದು, ಕಟ್ಟಡ ನಿರ್ಮಾಣ, ಮಕ್ಕಳ ಪೌಷ್ಠಿಕತೆ ನಿವಾರಿಸಲು ಕಾರ್ಯಕ್ರಮ, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ, ಲೋಕೋಪಯೋಗಿ ಇಲಾಖೆಗಳ ವಹಿಸಲಾಗಿದೆ. ಉಸ್ತುವಾರಿ, ಕುಡಿಯುವ ನೀರು, ಮೇವು, ಮನರೇಗಾ, ಬಿಸಿಯೂಟ, ಪಿಂಚಣಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸುವ ಜವಾಬ್ದಾರಿವಹಿಸಲಾಗಿದೆ.
ಗೃಹ ಹಾಗೂ ಸಣ್ಣ ಕೈಗಾರಿಕೆಗಳನ್ನು ಗುರುತಿಸಿ ಅವರಿಗೆ ಸರಕಾರ ಸವಲತ್ತುಗಳ ಬಗ್ಗೆ ಅರಿವು, ಉದ್ಯೋಗಾವಕಾಶ, ಖಾಸಗಿ ಸಾಮಾಜಿಕ ಜವಾಬ್ದಾರಿ, ಗ್ರಾಪಂಗಳ ಕಾರ್ಯನಿರ್ವಹಣೆ ಪರಿಶೀಲನೆಯ ಹೊಣೆ ತಾಲೂಕು ಉಸ್ತುವಾರಿಗಳ ಹೆಗಲಿಗೆ ಹಾಕಲಾಗಿದೆ.
ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ…
ತಾಲೂಕು ಉಸ್ತುವಾರಿ ಅಧಿಕಾರಿಗಳು ಪ್ರತಿ ತಿಂಗಳು ನಿರ್ವಹಿಸಿದ ಕಾರ್ಯವರದಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.
ಬ್ಯಾಡಗಿ, ರಟ್ಟಿಹಳ್ಳಿ, ಶಿಗ್ಗಾಂವಿ ತಾಲೂಕುಗಳಿಗೆ ಉಸ್ತುವಾರಿ ನೇಮಕ ಕಾಯ್ದಿರಿಸಲಾಗಿದೆ.
ಯಾರಿಗೆ ಯಾವ ತಾಲೂಕು ಉಸ್ತುವಾರಿ?
ಹಾವೇರಿ: ಪೂಜಾರ ವೀರಮಲ್ಲಪ್ಪ, ಅಪ್ಪರ್ ಜಿಲ್ಲಾಧಿಕಾರಿ ಹಾವೇರಿ
ರಾಣೆಬೆನ್ನೂರ: ರೇಷ್ಮಾ ಹಾನಗಲ್ಲ
ಹಾನಗಲ್ಲ: ಮಮತಾ ಹೊಸಗೌಡರ, ಯೋಜನಾ ನಿರ್ದೇಶಕಿ, ಡಿಯುಡಿಸಿ, ಹಾವೇರಿ
ಹಿರೇಕೆರೂರ: ಶ್ರೀಪಾದ ಎಸ್.ಬಿ., ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ವಿಧಾನಸಭೆ ಬೆಂಗಳೂರು
ಸವಣೂರ: ಮೊಹ್ಮಮದ್ ಖೈಜಾರ್, ಸಹಾಯಕ ಆಯುಕ್ತ, ಸವಣೂರ ಉಪ ವಿಭಾಗ, ಹಾವೇರಿ