ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕು ಮಧುರೆ ಶನಿಮಹಾತ್ಮ ದೇಗುಲಕ್ಕೆ ಮಾಂಸದ ಹಾರ ತಂದು ಸಿಕ್ಕಿಬಿದ್ದ ದುಷ್ಕರ್ಮಿಗಳು ಸ್ಫೋಟಕ ವಿಷಯ ಬಾಯ್ಬಿಟ್ಟಿದ್ದಾರೆ.
ಶನಿದೇವರಿಗೆ ಮಾಂಸದ ಹಾರ ಹಾಕಿದರೆ ವ್ಯಾಪಾರ ವ್ಯವಹಾರದಲ್ಲಿ ಲಾಭ ಕಾಣಬಹುದು ಎಂಬ ಜ್ಯೋತಿಷಿಯೊಬ್ಬನ ಅಣತಿಯಂತೆ ಕೃತ್ಯ ಎಸಗಿರುವುದಾಗಿ ದುಷ್ಕರ್ಮಿಗಳು ಪೊಲೀಸರ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ. ಸಿಕ್ಕಿಬಿದ್ದ ಅರೋಪಿಗಳಿಂದ ಮತ್ತಷ್ಟು ಸತ್ಯ ಕಕ್ಕಿಸುತ್ತಿರುವ ಪೊಲೀಸರು ಇದೀಗ ಜ್ಯೋತಿಷಿಯ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಪ್ರಿಯಕರನ ಭೇಟಿಗೆಂದು ಬಂದ ಗಗನಸಖಿ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವು; ಪರಿಚಯ-ಪ್ರೇಮವಾದ 6 ತಿಂಗಳಲ್ಲೇ ಮರಣ
ವ್ಯಾಪಾರ ಲಾಸ್!
ಸಿಕ್ಕಿಬಿದ್ದಿರುವ ದುಷ್ಕರ್ಮಿಗಳ ಪೈಕಿ ಮುನಿರಾಜು ಎಂಬಾತ ಸಣ್ಣಮಟ್ಟದ ಬಿಜಿನೆಸ್ ಮಾಡುತ್ತಿದ್ದು, ಕೆಲವು ತಿಂಗಳಿಂದ ವ್ಯಾಪಾರದಲ್ಲಿ ನಷ್ಟ ಉಂಟಾಗಿತ್ತು. ಇದರಿಂದ ಚಿಂತಾಕ್ರಾಂತನಾಗಿದ್ದ ಈತನಿಗೆ ವೈಟ್ಫೀಲ್ಡ್ನಲ್ಲಿರುವ ಜ್ಯೋತಿಷಿ ಪರಿಚಯವಾಗಿತ್ತು ಎನ್ನಲಾಗಿದೆ. ಮೂರು ಬಾರಿ ಶನಿದೇವರಿಗೆ ಮಾಂಸದ ತುಂಡು ಬೆರೆಸಿದ ಹೂವಿನ ಹಾರ ಹಾಕಿದರೆ ವ್ಯಾಪಾರದಲ್ಲಿ ಲಾಭ ಗಳಿಸಬಹುದು ಎಂದು ಜ್ಯೋತಿಷಿ ಹೇಳಿದ್ದ ಎನ್ನಲಾಗಿದೆ. ಅದರಂತೆ ಕೃತ್ಯಕ್ಕೆ ಮುಂದಾಗಿದ್ದ.
ಇದನ್ನೂ ಓದಿ: ಸರ್ಕಾರಕ್ಕೆ ಮತ್ತೊಂದು ತಲೆನೋವು; ಇನ್ನೊಂದು ಸರ್ಕಾರಿ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನ
ಕಳೆದ ಒಂದೂವರೆ ತಿಂಗಳ ಹಿಂದೆ ದೇಗುಲಕ್ಕೆ ಮಾಂಸದ ಹಾರ ಇಟ್ಟು ಎಸ್ಕೇಪ್ ಆಗಿದ್ದ ಖದೀಮ ಈ ಬಾರಿ ದೇಗುಲದ ಸಿಬ್ಬಂದಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಈತನ ಕೃತ್ಯಕ್ಕೆ ಸಾಥ್ ನೀಡಿದ ಆಟೋ ಚಾಲಕ ಸೋಮಶೇಖರ್ ಸಹ ಪೊಲೀಸರ ಅತಿಥಿಯಾಗಿದ್ದಾನೆ.