ಬೆಂಗಳೂರು: ಕೆಲವೇ ದಿನಗಳ ಹಿಂದೆ ಯೋಗರಾಜ್ ಭಟ್, ಕೆ.ಎಂ. ಚೈತನ್ಯ, ಶಶಾಂಕ್, ಜಯತೀರ್ಥ ಮತ್ತು ‘ಲೂಸಿಯಾ’ ಪವನ್ ಕುಮಾರ್ ಜತೆಯಾಗಿ ಸೇರಿ ಒಂದು ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಸದ್ಯದಲ್ಲೇ ಆ ಚಿತ್ರವನ್ನು ಯಾರು ನಿರ್ಮಿಸುತ್ತಿದ್ದಾರೆ ಎಂಬ ವಿಷಯವನ್ನು ಬಹಿರಂಗಗೊಳಿಸುವುದಾಗಿ ಹೇಳಲಾಗಿತ್ತು.
ಈಗ ನಿರ್ದೇಶಕ ಮತ್ತು ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್ ಬ್ಯಾನರ್ನಲ್ಲಿ ಸದ್ದಿಲ್ಲದೆ ಹೊಸ ಚಿತ್ರವನ್ನು ಪ್ರಾರಂಭಿಸಿದ್ದು, ಈ ಚಿತ್ರಕ್ಕೆ ‘ಪೆಂಟಗನ್’ ಎಂದು ಹೆಸರಿಡಲಾಗಿದೆ. ಈ ಚಿತ್ರದ ವಿಶೇಷತೆಯೆಂದರೆ, ಐವರು ನಿರ್ದೇಶಕರು ಒಟ್ಟಿಗೆ ಸೇರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ: ‘ಓಂ ಶಾಂತಿ ಓಂ..’: ದೀಪಿಕಾ ಪಡುಕೋಣೆಗೆ ಖುಷಿ, ಅರ್ಜುನ್ ರಾಮ್ಪಾಲ್ಗೆ ಮಂಡೆಬಿಸಿ!
ಹಾಗಾದರೆ, ಯೋಗರಾಜ್ ಭಟ್ ಮುಂತಾದವರು ನಿರ್ದೇಶಿಸುತ್ತಿರುವ ಚಿತ್ರವನ್ನೇ ಗುರು ನಿರ್ಮಾಣ ಮಾಡುತ್ತಿದ್ದಾರಾ? ಅಥವಾ ಇದೇ ಬೇರೆ ಚಿತ್ರವಾ? ಎಂಬ ಪ್ರಶ್ನೆಯೊಂದು ಸಹಜವಾಗಿಯೇ ಬರುತ್ತದೆ. ಆದರೆ, ಈ ಬಗ್ಗೆ ಸದ್ಯದಲ್ಲೇ ಅಧಿಕೃತವಾಗಿ ಮಾತನಾಡುವುದಾಗಿ ಹೇಳುತ್ತಾರೆ ಗುರು ದೇಶಪಾಂಡೆ.
ವಿಶೇಷವೆಂದರೆ, ಈಗಾಗಲೇ ‘ಪೆಂಟಗನ್’ನ ಚಿತ್ರೀಕರಣ ಸದ್ದಿಲ್ಲದೆ ಪ್ರಾರಂಭವಾಗಿದೆಯಂತೆ. ಈ ಕುರಿತು ಮಾತನಾಡುವ ಅವರು, ‘ನಾವು ಈಗಾಗಲೇ ಶೂಟಿಂಗ್ ಶುರು ಮಾಡಿದ್ದು, ಐದು ಕಥೆಗಳಲ್ಲಿ ಈಗಾಗಲೇ ಎರಡರ ಚಿತ್ರೀಕರಣ ಮುಗಿಸಿದ್ದೇವೆ. ಇತರ ಕಥೆಗಳು ವಿವಿಧ ಹಂತಗಳಲ್ಲಿವೆ. ಈ ಚಿತ್ರ ಸಿದ್ಧತೆಗಳು ಹಲವು ತಿಂಗಳ ಹಿಂದೆಯೇ ಪ್ರಾರಂಭವಾಗಿದ್ದು, ಕೋವಿಡ್ನಿಂದಾಗಿ ಅಧಿಕೃತ ಘೋಷಣೆ ಮಾಡಲಾಗಲಿಲ್ಲ’ ಎನ್ನುತ್ತಾರೆ.
ಇದನ್ನೂ ಓದಿ: 12 ವರ್ಷದಿಂದ ಕಾಯುತ್ತಿದ್ದ ವೃದ್ಧೆಯ ಕಂಡು ಭಾವುಕರಾದ ಪುನೀತ್ ರಾಜ್ಕುಮಾರ್
ಚಿತ್ರಕ್ಕೆ ‘ಪೆಂಟಗನ್’ ಎಂದು ಹೆಸರಿಟ್ಟಿರುವುದರ ಬಗ್ಗೆ ಮಾತನಾಡುವ ಅವರು, ‘ಪೆಂಟಗನ್ ಎಂದರೆ ಐದು ಮುಖಗಳ ಆಕಾರ. ನಮ್ಮ ಚಿತ್ರವು ಐದು ಬೆಸುಗೆ ಇರುವ ಕಥೆಗಳನ್ನು ಹೊಂದಿದೆ. ಹಾಗಾಗಿ ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದೇವೆ. ಪೆಂಟಗನ್ ವಿನ್ಯಾಸ ಮೊದಲು ನೋಡುವಾಗ ಸರವಾಗಿದೆ ಅನಿಸಿದರೂ ಕ್ರಮೇಣ ಅದರ ಸಂಕೀರ್ಣತೆ ಅರ್ಥವಾಗುತ್ತದೆ. ಅದೇ ರೀತಿ, ಇಲ್ಲಿ ಹಲವು ಲೇಯರ್ಗಳ ಮೂಲಕ ಕಥೆ ಹೇಳಲಾಗಿದೆ’ ಎನ್ನುತ್ತಾರೆ.
ಇಲ್ಲಿ ಒಂದೊಂದು ಕಥೆಯೂ ವಿಭಿನ್ನವಾಗಿದ್ದು, ಒಂದು ಕಥೆಯಿಂದ ಇನ್ನೊಂದು ಕೊಂಡಿ ಇದೆಯಂತೆ. ಅಷ್ಟೇ ಅಲ್ಲ, ಅಷ್ಟೂ ಕಥೆಗಳ ಆತ್ಮ ಒಂದೇ ಆಗಿದೆಯಂತೆ. ಐದು ನಿರ್ದೇಶಕರಷ್ಟೇ ಅಲ್ಲ, ಐವರು ಛಾಯಾಗ್ರಾಹಕರು ಸಹ ಕೆಲಸ ಮಾಡಲಿದ್ದಾರೆ.