ಬೆಳ್ತಂಗಡಿ: ನಗರ ಪಂಚಾಯಿತಿ ವ್ಯಾಪ್ತಿಯ 11 ವಾರ್ಡ್ಗಳಿಗೆ ನೀರು ಪೂರೈಸುತ್ತಿದ್ದ ಸೋಮಾವತಿ ನದಿಯಲ್ಲಿ ದುಷ್ಕರ್ಮಿಗಳು ಮೀನುಗಳ ಮಾರಣಹೋಮ ನಡೆಸಿದ್ದಾರೆ.
ಬೆಳ್ತಂಗಡಿ ನಗರ ಪಂಚಾಯಿತಿ ಕುಡಿಯುವ ನೀರಿನ ಪಂಪ್ಹೌಸ್ ಬಳಿಯ ಗುಂಡಿಯಲ್ಲಿ ಸೋಮವಾರ ರಾತ್ರಿ ಕಿಡಿಗೇಡಿಗಳು ಸ್ಫೋಟಕ ಬಳಸಿ ಅಥವಾ ವಿಷ ಬೆರೆಸಿ ಮೀನು ಹಿಡಿಯಲು ಯತ್ನಿಸಿದ್ದಾರೆ. ರಾತ್ರಿ ಐದಾರು ಮಂದಿಯ ತಂಡ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಸ್ಥಳೀಯರು ನೀಡಿದ ಖಚಿತ ಮಾಹಿತಿಯನ್ವಯ ಬೆಳ್ತಂಗಡಿ ಠಾಣೆ ಎಸ್.ಐ. ನಂದಕುಮಾರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದಾಗ ಕಿಡಿಗೇಡಿಗಳು ಕತ್ತಲಲ್ಲಿ ಪರಾರಿಯಾಗಿದ್ದಾರೆ. ಬಹುತೇಕ ದೊಡ್ಡ ಮೀನುಗಳು ಸತ್ತಿವೆ.
ನೀರು ಪೂರೈಕೆ ಸ್ಥಗಿತ: ಸ್ಥಳಕ್ಕೆ ಮುಖ್ಯಾಧಿಕಾರಿ ಸುಧಾಕರ್, ನಗರ ಪಂಚಾಯಿತಿ ಸದಸ್ಯ ಶರತ್ ಕುಮಾರ್ ಭೇಟಿ ನೀಡಿದ್ದಾರೆ. ನದಿಪಾತ್ರದಿಂದ ಸುಮಾರು 10 ದಿನಗಳಿಗೆ ಬಳಕೆಯಾಗುವಷ್ಟು ಇದ್ದ ನೀರು ಸಂಪೂರ್ಣ ಕಲುಷಿತಗೊಂಡಿದೆ. ಈ ಕುರಿತು ನಗರ ಪಂಚಾಯಿತಿ ಮುಖ್ಯಾಧಿಕಾರಿ ನೇತೃತ್ವದಲ್ಲಿ ತುರ್ತು ಸಭೆ ಕರೆದು ನಗರಕ್ಕೆ ನೀರು ಸರಬರಾಜು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.