More

    ಮೀನುಗಾರಿಕೆ ಬಂದರಿಗೆ ‘ಎ’ ಗ್ರೇಡ್

    ಹರೀಶ್ ಮೋಟುಕಾನ ಮಂಗಳೂರು
    ಮೀನುಗಾರಿಕೆ ಬಂದರು ವ್ಯಾಪ್ತಿಯಲ್ಲಿ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಆರೋಗ್ಯಕರ ಪರಿಕಲ್ಪನೆಯಲ್ಲಿ ಮಂಗಳೂರು ಮೀನುಗಾರಿಕೆ ಬಂದರನ್ನು ದೇಶದಲ್ಲಿಯೇ ‘ಎ’ ಗ್ರೇಡ್ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು ಪೂರಕ ಸಿದ್ಧತೆ ಆರಂಭವಾಗಿದೆ.

    ದೇಶದ ಎಲ್ಲ ಮೀನುಗಾರಿಕೆ ಬಂದರುಗಳಲ್ಲಿ ಮೂಲಸೌಕರ್ಯ ಹೆಚ್ಚಿಸಿಕೊಂಡು ಗುಣಮಟ್ಟದ ಮೀನುಗಾರಿಕೆಗೆ ಆದ್ಯತೆ ನೀಡುವ ನೆಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ಬಂದರನ್ನು ‘ಎ’ ಗ್ರೇಡ್ ಮಾದರಿಯಲ್ಲಿ ರೂಪಿಸಿಕೊಂಡು ಮೀನು ರಫ್ತು ಮಾಡುವ ಪರಿಕಲ್ಪನೆಗೂ ಇನ್ನಷ್ಟು ಶಕ್ತಿ ನೀಡುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಇದರಂತೆ ಮಂಗಳೂರು ಮೀನುಗಾರಿಕೆ ಬಂದರನ್ನು ಆಯ್ಕೆ ಮಾಡಲಾಗಿದೆ.

    ಪ್ರವಾಸಿ ನೆಲೆಯಲ್ಲಿ ಅಭಿವೃದ್ಧಿ: ಮಂಗಳೂರು ಮೀನುಗಾರಿಕೆ ಬಂದರನ್ನು ಆರೋಗ್ಯ ಪೂರಕ, ಪ್ರವಾಸಿ ನೆಲೆಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ಕೃಷಿ ವಿಕಾಸ ಯೋಜನೆಯಲ್ಲಿ ಅನುದಾನ ನೀಡಲಿದೆ. ಈ ಯೋಜನೆಯ ಅಧಿಕಾರಿಗಳ ಉನ್ನತ ಮಟ್ಟದ ತಂಡ ಈಗಾಗಲೇ ಬಂದರಿಗೆ ಭೇಟಿ ನೀಡಿದೆ. ಇಲ್ಲಿನ ಮುಖ್ಯ ಅವಶ್ಯಕತೆಗಳ ಬಗ್ಗೆ ವಿವರವಾದ ಮಾಹಿತಿ ಸಂಗ್ರಹಿಸಿದೆ. ಮೀನುಗಾರಿಕೆ ಪ್ರಮುಖರು, ಅಧಿಕಾರಿಗಳ ಜತೆಗೂ ತಂಡ ಚರ್ಚೆ ನಡೆಸಿದೆ. ಬಂದರು ಮೇಲ್ದರ್ಜೆಯ ಅವಶ್ಯಕ ಸಂಗತಿಗಳ ಬಗ್ಗೆ ವಿವರಣೆ ಪಡೆದುಕೊಂಡಿದೆ. ಇದರ ಆಧಾರದಲ್ಲಿ ಮುಂದಿನ ದಿನದಲ್ಲಿ ಯೋಜನೆಯ ಸರ್ವೇ, ವಿವರ ಸಂಗ್ರಹಿಸಲು ತಾಂತ್ರಿಕ ಪರಿಣತರ ತಂಡ ಬಂದರಿಗೆ ಆಗಮಿಸಲಿದೆ. ಇಲ್ಲಿ ಕೈಗೊಳ್ಳಬೇಕಾದ ಯೋಜನೆ, ತಗಲುವ ವೆಚ್ಚ, ಅವಕಾಶ, ಸುಧಾರಣೆ ಕ್ರಮಗಳ ಬಗ್ಗೆ ಸಮೀಕ್ಷೆ ನಡೆಸಲಿವೆ. ಆ ವರದಿಯನ್ನು ಕೃಷಿ ವಿಕಾಸ ಯೋಜನೆಯ ಕೇಂದ್ರ ಕಚೇರಿಗೆ ಸಲ್ಲಿಸಲಿದೆ. ಬಳಿಕ ಕೇಂದ್ರ ಅನುದಾನ ಬಿಡುಗಡೆ ಮಾಡಲಿದೆ.

    ಪ್ರಸ್ತಾವಿಸಲಾಗಿರುವ ಬೇಡಿಕೆಗಳು: ಇಟಿಪಿ ಪ್ಲಾೃಂಟ್-ಮೀನುಗಾರಿಕೆ ಬಂದರಿನಲ್ಲಿ ಬಳಕೆ ಮಾಡಿದ ಬಳಿಕದ ಕಲುಷಿತ ನೀರನ್ನು ಸಂಸ್ಕರಿಸಿ ಇತರ ಬಳಕೆಗೆ ಬೀಡುವ ಪರಿಕಲ್ಪನೆ. ಉಪ್ಪು ನೀರು ಸಂಸ್ಕರಣಾ ಘಟಕ -ಮೀನುಗಾರಿಕೆಗೆ ಬಳಕೆ ಮಾಡಲು ಅನುಕೂಲ. ಬಂದರಿನ ಹರಾಜು ಪ್ರಾಂಗಣ ಸುಸಜ್ಜಿತ ಮಾದರಿ ಅಭಿವೃದ್ಧಿ. ಬಂದರು ಸಂಪರ್ಕ ರಸ್ತೆ ಅಭಿವೃದ್ಧಿ. ಸಿಸಿ ಕ್ಯಾಮರಾ ಅಳವಡಿಕೆ. ಪಾರ್ಕಿಂಗ್ ವ್ಯವಸ್ಥೆ ಸುಸಜ್ಜಿತಗೊಳಿಸಲು ಯೋಜನೆ. ಬಂದರು ವ್ಯಾಪ್ತಿಯಲ್ಲಿ ಸೋಲಾರ್ ಲೈಟ್ ಅಳವಡಿಕೆ. ಸುಸಜ್ಜಿತ ಶೌಚಗೃಹ.

    ಮಂಗಳೂರಿನ ಮೀನುಗಾರಿಕೆ ಬಂದರಿನ ಅಭಿವೃದ್ಧಿ ನೆಲೆಯಲ್ಲಿ ಕೇಂದ್ರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಅನುದಾನ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ತಜ್ಞರ ತಂಡ ಮಂಗಳೂರು ಬಂದರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇಲ್ಲಿನ ಅಗತ್ಯಗಳ ಬಗ್ಗೆ ಮೀನುಗಾರ ಮುಖಂಡರಿಂದ ತಜ್ಞರ ತಂಡಕ್ಕೆ ವಿವರಣೆ ನೀಡಲಾಗಿದೆ. ಮುಂದೆ ಬೇಡಿಕೆಗೆ ಅನುಗುಣವಾಗಿ ಕೇಂದ್ರ ನಿಯಮಾನುಸಾರ ಅನುದಾನ ನೀಡಲಿದೆ.
    ಹರೀಶ್ ಕುಮಾರ್ ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ ದ.ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts