ಲಖನೌ: ಉತ್ತರಪ್ರದೇಶದ ಬುಲಂದ್ ಶಹರ್ ಎಂಬಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮೊದಲ ಸೇನಾ ಶಾಲೆಯನ್ನು ಇದೇ ಏಪ್ರಿಲ್ನಿಂದ ಆರಂಭಿಸಲಿದೆ.
ಶಾಲೆಯು ವಿದ್ಯಾಬಾರತಿ ಶಾಲೆಯಂತೆ ನಡೆಸಲಾಗುವುದು. ಇದರ ಮುಖ್ಯ ಉದ್ದೇಶ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಉತ್ತಮ ನಾಗರಿಕರನ್ನು ತಯಾರು ಮಾಡುವುದು ಎಂದು ಆರ್ಎಸ್ಎಸ್ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.
ಬಾಲಕರ ಇಂಗ್ಲಿಷ್ ಮಾಧ್ಯಮ ಶಾಲೆಗೆ ಆರ್ಎಸ್ಎಸ್ನ ಈ ಹಿಂದಿನ ಮುಖ್ಯಸ್ಥ ರಾಜೇಂದ್ರ ಸಿಂಗ್ ಅಕಾ ರಜ್ಜು ಭಯ್ಯಾ ಎಂದು ಹೆಸರಿಸಲಾಗುವುದು. ರಜ್ಜು ಭಯ್ಯಾ ಸೈನಿಕ ವಿದ್ಯಾ ಮಂದಿರವು ಸೇನಾ ಪಡೆಗಳಿಗೆ ಸೇರಲು ಅಂದರೆ ಪ್ರವೇಶ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗಳಲ್ಲಿ ಉತ್ತೀರ್ಣ ಹೊಂದಲು ಬೇಕಾಗುವ ಎಲ್ಲ ತರಬೇತಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಆರಂಭದಲ್ಲಿ, ಶಾಲೆಯು 6ನೇ ತರಗತಿಗೆ ಮಾತ್ರ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ನಂತರ ಅದನ್ನು 12ನೇ ತರಗತಿಗೆ ನವೀಕರಿಸಲಾಗುತ್ತದೆ. ಶಾಲೆ ವಸತಿಯುತ ಶಾಲೆಯಾಗಿದ್ದು, ಖಂಡ್ವಾಯ ಗ್ರಾಮದಲ್ಲಿ ನಡೆಯಲಿದೆ ಎಂದಿದ್ದಾರೆ.
ಭಾರತದ ಮಾಜಿ ಸೇನಾಧಿಕಾರಿ ಕರ್ನಲ್ ಶಿವ ಪ್ರತಾಪ್ ಸಿಂಗ್ ಎಂಬುವರು ಶಾಲೆಯ ಮುಖ್ಯಸ್ಥರಾಗಿರುತ್ತಾರೆ. ಶಾಲೆಗಾಗಿ ಕಟ್ಟಡ ಮತ್ತು ಅರ್ಜಿ ಕರೆಯುವ ಪ್ರಕ್ರಿಯೆ ಆರಂಭವಾಗಿದೆ. ಒಟ್ಟು 160 ವಿದ್ಯಾರ್ಥಿಗಳಿಂದ ಪ್ರವೇಶ ಪಡೆಯಲಾಗುವುದು ಎಂದರು.
ಅರ್ಜಿ ಭರ್ತಿ ಮಾಡಲು ಫೆ.23 ರವರೆಗೆ ಆವಕಾಶವಿದ್ದು ಮಾರ್ಚ್ 1ರಂದು ಪ್ರವೇಶ ಪರೀಕ್ಷೆ ನಿಗದಿಗೊಳಿಸಲಾಗಿದೆ. ಇದರಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ಮೃತ ಯೋಧರ ಮಕ್ಕಳಿಗೆ 5 ಸೀಟು ಮೀಸಲಾಗಿರಿಸಿದ್ದು, ಉಳಿದಂತೆ ಯಾವ ಮೀಸಲಾತಿಗೂ ಅವಕಾಶವಿಲ್ಲ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)