ಬೆಂಗಳೂರು: ವಿಜಯದಶಮಿ ಹಬ್ಬದಂದು ಕುರಿ ಕತ್ತರಿಸಿದ ಗ್ರಾಮಸ್ಥರ ವಿರುದ್ಧ ಕಾಡುಗೋಡಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಸಿಗೇಹಳ್ಳಿ ನಿವಾಸಿಗಳು ವಿಜಯದಶಮಿಗೆ ಊರ ದೇವಸ್ಥಾನದ ಮುಂದೆ ಮೂರು ಕುರಿಗಳನ್ನು ಬಲಿ ಕೊಟ್ಟಿದ್ದರು. ಇದರ ವಿಡಿಯೋ ಮತ್ತು ಪೋಟೋವನ್ನು ವ್ಯಕ್ತಿಯೊಬ್ಬ, ಬುಧವಾರ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಬೆಂಗಳೂರು ನಗರ ಪೊಲೀಸರ ಖಾತೆಗೆ ಟ್ಯಾಗ್ ಮಾಡಿ ದೂರು ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಕಾಡುಗೋಡಿ ಠಾಣೆಗೆ ಮಾಹಿತಿ ನೀಡಿದ್ದರು.
ಇದರ ಮೇರೆಗೆ ಸಿಗೇಹಳ್ಳಿಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದಾಗ ದೇವಸ್ಥಾನದ ಮುಂದೆ ರಕ್ತದ ಕಲೆಗಳು ಪತ್ತೆಯಾಗಿದೆ. ಸ್ಥಳೀಯರನ್ನು ವಿಚಾರಣೆ ನಡೆಸಿ ಕುರಿ ಕಡಿತ ಆರೋಪದ ಮೇಲೆ ಚಿಕ್ಕ ಯಲ್ಲಪ್ಪ, ಬಾಬು, ಮುನಿಕೃಷ್ಣಪ್ಪ ಮತ್ತು ಮುನಿರಾಜು ಎಂಬುವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ, ವಿಚಾರಣೆಗೆ ಹಾಜರಾಗುವಂತೆ ಆರೋಪಿತರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.