ಬೈಲಹೊಂಗಲ: ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಿದ ಪರಿಣಾಮ ಪಟ್ಟಣದಲ್ಲಿ ಮುದ್ರಣದ ಕೆಲಸಗಳು ಬಂದ್ ಆದ ಪರಿಣಾಮ ಮುದ್ರಣಕಾರರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಆದ್ದರಿಂದ ಸರ್ಕಾರ ಘೋಷಿಸಿದ ಪ್ಯಾಕೇಜ್ನಲ್ಲಿ ಮುದ್ರಣಕಾರರಿಗೂ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಮುದ್ರಣಕಾರರು ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮುದ್ರಣಕಾರ ಮೃತ್ಯುಂಜಯ ಪಾಟೀಲ ಮಾತನಾಡಿ, ಪ್ರತಿ ವರ್ಷ ಮಾರ್ಚ್ನಿಂದ ಮೇ ತಿಂಗಳವರೆಗೂ ಮದುವೆ ಸಮಾರಂಭದ ಆಮಂತ್ರಣ ಪತ್ರಿಕೆಗಳು ಹಾಗೂ ಸರ್ಕಾರಿ, ಅರೆ ಸರ್ಕಾರಿ ಮುದ್ರಣ ಕೆಲಸಗಳು ಹೆಚ್ಚು ಬರುತ್ತಿದ್ದವು. ಲಾಕ್ಡೌನ್ ಆದೇಶದಿಂದ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಜೀವನೋಪಾಯದ ನಿರ್ವಹಣೆ ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರ ಮುದ್ರಣಕಾರರಿಗೆ ಆರ್ಥಿಕ ನೆರವು ಹಾಗೂ ಕೆಲವೊಂದು ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು. ಮಹಾಂತೇಶ ಭರಮನಾಯ್ಕರ, ಬಸವರಾಜ ಕೊಣ್ಣೂರ, ನಾಗರಾಜ ಪಾಟೀಲ, ರಾಮಕೃಷ್ಣ ಬೋಂಗಾಳೆ, ಅಮೃತ ಕಾಮಕರ, ಸಿದ್ಧಾರೂಢ ಆನಿಗೋಳ, ಜಗದೀಶ ಲೋಕಾಪುರ, ವಿಜಯ ಬಡ್ಲಿ, ಶಂಕರ ಪಟ್ಟಣಶೆಟ್ಟಿ, ಶಿವಕುಮಾರ ಪಾಟೀಲ ಹಾಗೂ ಮುದ್ರಣ ಕೆಲಸಗಾರರು ಇದ್ದರು.