ಹೊಸಪೇಟೆ: ರೈತ ಹೋರಾಟದ ದಿಕ್ಕು ತಪ್ಪಿಸಲು ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ. ಗಣರಾಜ್ಯೋತ್ಸವದಂದು ಪ್ರಧಾನಿ ಭಾಷಣದ ನಂತರ ರಾಜ್ಯ ಹಾಗೂ ಕೇಂದ್ರದಲ್ಲಿ ಮತ್ತೊಮ್ಮೆ ಅನ್ನದಾತನ ಶಕ್ತಿ ತೋರಿಸಲಾಗುವುದು ಎಂದು ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತರು ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ನಡೆಸಿ ಜೀವತೆತ್ತರೂ ಪ್ರಧಾನಿ ಕನಿಷ್ಠ ಕಂಬನಿಯೂ ಮಿಡಿದಿಲ್ಲ. ಎಲ್ಲೋ ಬೀಚ್ನಲ್ಲಿ ಹೊಸ ಜೋಡಿಗಳು ಕಸಗೂಡಿಸಿದರೆ ಅದರ ಬಗ್ಗೆ ಮನ್ ಕಿ ಬಾತ್ನಲ್ಲಿ ಮಾತನಾಡುತ್ತಾರೆ. ದೇಶಕ್ಕೆ ಅನ್ನ ಕೊಡುವ ರೈತನನ್ನು ಮತ್ತಷ್ಟು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ನಾನೂ ರಾಮನ ಭಕ್ತನೇ. ಆದರೆ, ಈ ಸಂದರ್ಭ ಮಂದಿರ ನಿರ್ಮಾಣಕ್ಕಿಂತ ರೈತನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ಮುಖ್ಯ.
ದೇಶದ ಜನರನ್ನು ಭಾವನಾತ್ಮಕ ವಿಚಾರಗಳಿಂದ ದಿಕ್ಕು ತಪ್ಪಿಸಲಾಗುತ್ತಿದೆ. ಭಾರತದೊಳಗೆ ಚೀನಾ ಹಳ್ಳಿ ನಿರ್ಮಿಸಿದರೂ ಸರ್ಕಾರಕ್ಕೆ ಎಚ್ಚರಿಕೆ ಇಲ್ಲ. ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕರೊನಾ ಸಂದರ್ಭ ಜನರ ಬಾಯಿಗೆ ಬಟ್ಟೆ ಕಟ್ಟಿ, ರೈತವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದರು. ರೈತಸಂಘದ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್, ಮುಖಂಡರಾದ ರೇವಣಸಿದ್ದಪ್ಪ, ಸಣ್ಣಕ್ಕಿ ರುದ್ರಪ್ಪ, ತಳವಾರ ವೆಂಕಟೇಶ್ ಇತರರಿದ್ದರು.