ಚೆನ್ನೈ: ಕಣ್ಣಿಗೆ ಕಾಣಿಸದ ಕರೊನಾ ವೈರಸ್ ಹಾವಳಿಯನ್ನು ನಿಯಂತ್ರಿಸಲಾಗದೆ ಭಾರತ ಮಾತ್ರವಲ್ಲದೆ ಇಡೀ ಜಗತ್ತೇ ಪರದಾಡುತ್ತಿದೆ. ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್, ಕರೊನಾ ವೈರಸ್ ವಿರುದ್ಧದ ಈ ಹೋರಾಟವನ್ನು ಕಂಪ್ಯೂಟರ್ ಜತೆಗೆ ಚೆಸ್ ಆಟ ಆಡಿದಂತೆ ಎಂದು ಬಣ್ಣಿಸಿದ್ದಾರೆ. ಕರೊನಾ ವೈರಸ್ಗೆ ಯಾವುದೇ ಭಾವನೆಗಳಿಲ್ಲ. ಮಾರಕವಾಗಿ ದಾಳಿ ನಡೆಸುತ್ತಿದೆ. ಕಂಪ್ಯೂಟರ್ ಕೂಡ ನಮ್ಮ ಜತೆ ಅದೇ ರೀತಿ ಆಡುತ್ತದೆ ಎಂದು ಆನಂದ್, ಗ್ರಾಂಡ್ ಮಾಸ್ಟರ್ ಸೂರ್ಯಶೇಖರ್ ಗಂಗೂಲಿ ಜತೆಗಿನ ಆನ್ಲೈನ್ ಮಾತುಕತೆಯ ವೇಳೆ ಹೇಳಿದ್ದಾರೆ.
‘ಚೆಸ್ ಬೋರ್ಡ್ ಎದುರು ಕುಳಿತು ಆಡುವಾಗ ನಿಮಗೆ ಎದುರಾಳಿಯ ಭಾವನೆಗಳು ಗೊತ್ತಾಗುತ್ತವೆ. ಒಂದು ಉತ್ತಮ ನಡೆ ಇಟ್ಟಾಗ ಆತ ಒತ್ತಡಕ್ಕೆ ಒಳಗಾಗಿದ್ದು ತಿಳಿಯುತ್ತದೆ. ಆದರೆ ಕಂಪ್ಯೂಟರ್ ವಿರುದ್ಧ ಆಡುವಾಗ ಅದು ಗೊತ್ತಾಗುವುದಿಲ್ಲ. ಅದು ಪ್ರತಿ ದಾಳಿ ನಡೆಸುತ್ತ ಸಾಗುತ್ತದೆ’ ಎಂದು 5 ಬಾರಿಯ ವಿಶ್ವ ಚಾಂಪಿಯನ್ ಆನಂದ್ ವಿವರಿಸಿದ್ದಾರೆ.
ಇದನ್ನೂ ಓದಿ: ವಿಶ್ವ ನಂ. 1 ಟೆನಿಸ್ ಆಟಗಾರ ಜೋಕೊವಿಕ್ಗೆ ಕರೊನಾ ಸೋಂಕು
‘ಮಾಸ್ಕ್ ಧರಿಸುವುದರಿಂದ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ನೀವು ಕರೊನಾ ಸೋಂಕಿನ ವಿರುದ್ಧ ಮೇಲುಗೈ ಸಾಧಿಸಿದ್ದೀರಿ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಯಾವುದೇ ದಿನ ಕರೊನಾ ಸೋಂಕಿಗೆ ಒಳಗಾಗಬಹುದು. ವೈರಸ್ ಹಿಂದೇಟು ಹಾಕುವುದಿಲ್ಲ. ನಮಗೆ ಗೊತ್ತಾಗದ ರೀತಿಯಲ್ಲಿ ಅನಿರೀಕ್ಷಿತ ದಾಳಿ ನಡೆಸುತ್ತದೆ’ ಎಂದು 50 ವರ್ಷದ ಆನಂದ್ ಹೇಳಿದ್ದಾರೆ. ಆದರೆ ಕರೊನಾದಿಂದಾಗಿ ಚೆಸ್ ಆಟದಲ್ಲಿ ಪ್ರಯೋಗಗಳು ಹೆಚ್ಚಾಗಿವೆ. ಆನ್ಲೈನ್ ಟೂರ್ನಿಗಳು ನಿರಂತರವಾಗಿ ನಡೆಯುತ್ತಿವೆ ಎಂದಿದ್ದಾರೆ.
‘ಚೆಸ್ ಆಟವನ್ನು ದಶಕದ ಹಿಂದಿನಿಂದಲೇ ಆನ್ಲೈನ್ ಮೂಲಕ ಆಡಬಹುದಾಗಿತ್ತು. ಆದರೆ ಹಾಲಿ ಸನ್ನಿವೇಶದಲ್ಲಿ ಮಾತ್ರ ಇದು ಹೆಚ್ಚಾಗಿದೆ. ಹೀಗಾಗಿ 10 ವರ್ಷಗಳ ಹಿಂದೆಯೇ ಈ ಸಾಂಕ್ರಾಮಿಕ ಪಿಡುಗು ಬಂದಿರಲಿಲ್ಲ ಎಂಬುದರಿಂದ ನನಗೆ ಖುಷಿಯಾಗುತ್ತಿದೆ. ಈಗ ನಾವು ಆನ್ಲೈನ್ ಚೆಸ್ ಟೂರ್ನಿಗಳನ್ನು ಆಡಲು ಹೆಚ್ಚು ಸಜ್ಜಾಗಿದ್ದೇವೆ’ ಎಂದು ಆನಂದ್ ಹೇಳಿದ್ದಾರೆ.
ಇದನ್ನೂ ಓದಿ: ಬಾಸ್ಕೆಟ್ಬಾಲ್ ಆಟಗಾರ್ತಿ ಈಗ ಫೈಟರ್ ಜೆಟ್ ಪೈಲಟ್!
ಕಳೆದ ಫೆಬ್ರವರಿಯಲ್ಲಿ ಬುಂಡೆಸ್ಲಿಗಾ ಚೆಸ್ ಲೀಗ್ನಲ್ಲಿ ಆಡುವ ಸಲುವಾಗಿ ಆನಂದ್ ಜರ್ಮನಿಗೆ ತೆರಳಿದ್ದರು. ಬಳಿಕ ಕರೊನಾ ಹಾವಳಿ ಶುರುವಾದ ಕಾರಣ ಅಲ್ಲೇ ಸ್ವಯಂ ಐಸೋಲೇಷನ್ನಲ್ಲಿದ್ದರು. ಈ ನಡುವೆ ಮಾರ್ಚ್ನಲ್ಲಿ ಭಾರತದಲ್ಲೂ ಲಾಕ್ಡೌನ್ ಘೋಷಣೆಯಾದ ಕಾರಣ ಅವರಿಗೆ ತವರಿಗೆ ಮರಳಲು ಸಾಧ್ಯವಾಗಿರಲಿಲ್ಲ. ಮೇ ಅಂತ್ಯದಲ್ಲಿ ಕೊನೆಗೂ ಬೆಂಗಳೂರಿಗೆ ಬಂದಿಳಿದಿದ್ದ ಆನಂದ್, ಜೂನ್ ಮೊದಲ ವಾರದಲ್ಲಿ ಚೆನ್ನೈನ ಮನೆಗೆ ಮರಳಿದ್ದರು.
ಇಂಗ್ಲೆಂಡ್ ಪ್ರವಾಸಕ್ಕೆ ಹೊರಟು ನಿಂತ ಪಾಕಿಸ್ತಾನದ 10 ಕ್ರಿಕೆಟಿಗರಿಗೆ ಕರೊನಾ!