ಬೆಂಗಳೂರು: ರಾಜ್ಯದ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಡುವ ಅಬಕಾರಿ ಇಲಾಖೆಯಲ್ಲಿ ಸಚಿವರು ಹಾಗೂ ಆಯುಕ್ತರ ನಡುವಿನ ಮುಸುಕಿನ ಗುದ್ದಾಟ ಜೋರಾಗಿದೆ. ಇಲಾಖೆ ಆಯುಕ್ತ ಲೋಕೇಶ್ ಅವರು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿರುವ ಬಗ್ಗೆ ಸಚಿವ ಎಚ್.ನಾಗೇಶ್ ಗರಂ ಆಗಿದ್ದು, ಆಡಳಿತ ವಿಚಾರ ಸಂಬಂಧ ಆದೇಶ ಹೊರಡಿಸುವ ಮುನ್ನ ನನ್ನ ಗಮನಕ್ಕೆ ತರಬೇಕು ಎಂದು ಸೂಚಿಸಿದ್ದಾರೆ.
ಅಧಿಕಾರಿಗಳ ವರ್ಗಾವಣೆ, ಪದೋನ್ನತಿ, ಜೇಷ್ಠತಾ ಪಟ್ಟಿ ಹಾಗೂ ಹೊಸ ಯೋಜನೆಗಳ ಸೇರಿದಂತೆ ದೈನಂದಿನ ಆಡಳಿತ ಕೆಲಸಗಳ ಸಂಬಂಧ ಸಚಿವರ ಗಮನಕ್ಕೆ ತರದೆ ಆಯುಕ್ತ ಲೋಕೇಶ್ ಏಕಾಏಕಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕೆಲ ಅಧಿಕಾರಿಗಳು ಸಚಿವರಿಗೆ ದೂರು ನೀಡಿದ್ದಾರೆ. ಅಲ್ಲದೆ, ಕಳೆದ ತಿಂಗಳ ಹಿಂದೆಯಷ್ಟೇ ಕರ್ನಾಟಕ ರಾಜ್ಯ ಪಾನೀಯ ನಿಗಮದ (ಕೆಎಸ್ಬಿಸಿಎಲ್) ಡಿಪೋಗಳಲ್ಲಿ ಅವಧಿ ಮೀರಿದ ಬಿಯರ್ಗಳನ್ನು ಮಾರಾಟ ಮಾಡುವುದಕ್ಕೆ ಆಯುಕ್ತ ಲೋಕೇಶ್ ಆದೇಶ ಹೊರಡಿಸಿದ್ದರು. ಈ ಬಗ್ಗೆ ಸಚಿವರು ಮತ್ತಷ್ಟು ಗರಂ ಆಗಿದ್ದರು. ಈ ನಿಟ್ಟಿನಲ್ಲಿ ಆಡಳಿತ ವಿಚಾರಗಳ ಸಂಬಂಧ ಆದೇಶ ಹೊರಡಿಸುವ ಮುನ್ನ ನನ್ನ ಗಮನಕ್ಕೆ ತರಬೇಕು ಎಂದು ತಾಕೀತು ಮಾಡಿದ್ದಾರೆ.
ಇಲಾಖೆಯ ಕೆಲ ಅಧಿಕಾರಿಗಳ ಉದಾಸೀನದಿಂದಾಗಿ ಆಡಳಿತ ಕೆಲಸಗಳನ್ನು ಆಮೆ ವೇಗಕ್ಕಿಂತ ನಿಧಾನವಾಗಿ ಸಾಗುತ್ತಿದೆ. ‘ನಾಳೆ ಮಾಡಿದರಾಯಿತು, ನಾಡಿದ್ದು ಮಾಡಿದರಾಯಿತು’ ಎನ್ನುವ ಧೋರಣೆಯಲ್ಲಿದ್ದಾರೆ.