ಸೋಮವಾರಪೇಟೆ: ಜಾತಿ, ಧರ್ಮ, ಬಡವ, ಬಲ್ಲಿದ ಎಂಬ ತಾರತಮ್ಯವಿಲ್ಲ ಕ್ಷೇತ್ರವಿದ್ದರೆ ಅದು ಕ್ರೀಡಾಕ್ಷೇತ್ರ ಎಂದು ಶಾಸಕ ಡಾ. ಮಂತರ್ಗೌಡ ಅಭಿಪ್ರಾಯಪಟ್ಟರು.
ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ಸೋಮವಾರಪೇಟೆ ಜಯವೀರಮಾತೆ ದೇವಾಲಯದ ವತಿಯಿಂದ ತಾಲೂಕಿನ ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಶನಿವಾರದಿಂದ ಆಯೋಜಿಸಿರುವ ಮೂರು ದಿನಗಳ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕ್ರೀಡಕೂಟಗಳಿಂದ ಎಲ್ಲ ರೀತಿಯ ಬಾಂಧವ್ಯಗಳು ಬೇಸೆಯುತ್ತವೆ. ಎಲೆ ಮರೆಯ ಕಾಯಿಯಂತಿರುವ ಕ್ರೀಡಾಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಇಂತಹ ಕ್ರೀಡಾಕೂಟಗಳನ್ನು ಸಹಕಾರಿ. ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಗೆಲುವು, ಸೋಲಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಅಲ್ಪಸಂಖ್ಯಾತರ ರಕ್ಷಣೆ, ಅವರಿಗೆ ಭದ್ರತೆ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮೈಸೂರು ಗೋಪಾಲಗೌಡ ಆಸ್ಪತ್ರೆಯ ಮಾಲೀಕ ಡಾ.ಶುಶ್ರೂಷ್ಗೌಡ ಮಾತನಾಡಿ, ಇಂತಹ ಕ್ರೀಡಾಕೂಟಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಕ್ರೀಡಾಪಟುವಾಗಲೂ ಸಮತೋಲನ ಆಹಾರ ಮುಖ್ಯ. ಆರೋಗ್ಯವಂತ ವ್ಯಕ್ತಿ ಉತ್ತಮ ಕ್ರೀಡಾಪಟುವಾಗಲು ಸಾಧ್ಯ ಎಂದ ಅವರು, ಅಸೋಸಿಯೇಷನ್ ವತಿಯಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ಏಪರ್ಡಿಸಿದರೆ ಆಸ್ಪತ್ರೆ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅಥ್ಲೆಟಿಕ್ ತರಬೇತುದಾರರು ಹಾಗೂ ಮಾಜಿ ಪೊಲೀಸ್ ಅಧಿಕಾರಿ ಅಂತೋಣಿ ಡಿಸೋಜ, ಅಂತಾರಾಷ್ಟ್ರೀಯ ಒಳಾಂಗಣ ಕ್ರಿಕೆಟ್ ಆಟಗಾರ ಆಶಿಸ್ ಕ್ರಿಸ್ಟಿ, ನ್ಯಾನೋ ಸೈನ್ಸ್ ಸಂಶೋಧಕಿ ಗ್ಲೆನಿಟಾ ಬ್ರಿಜಿತ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಒಎಲ್ವಿ ದೇವಾಲಯದ ಧರ್ಮಗುರುಗಳಾದ ಎಂ.ರಾಯಪ್ಪ, ದಕ್ಚಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಷಿಯನ್ ರೋಡ್ರಿಗಸ್, ಅಮ್ಮತಿ ಚರ್ಚ್ ಧರ್ಮಗುರು ರೈಮಂಡ್, ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಸ್.ಎಂ.ಡಿಸಿಲ್ವಾ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶೀಲಾ ಡಿಸೋಜ, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಂ.ಪಾರ್ವತಿ, ಪ್ರಮುಖರಾದ ಕೆ.ಎ.ಯಾಕುಬ್, ಅಬ್ದುಲ್ ರಜಾಕ್, ಎಂ.ಟಿ.ಬೇಬಿ, ಐ.ಡಿ.ರಾಯ್, ಜೋಸೆಫ್ ಡಿಸಿಲ್ವಾ ಮತ್ತಿತರರು ಇದ್ದರು.