ಲಿಂಗಸುಗೂರು: ಅಂಗವಿಕಲರು ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳ್ಳಲು ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂದು ಒತ್ತಾಯಿಸಿ ರಾಜ್ಯ ಅಂಗವಿಕಲರ ಸಂಘ-ಸಂಸ್ಥೆಗಳ ಒಕ್ಕೂಟ ಎಸಿ ಅವಿನಾಶ ಶಿಂಧೆಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಅಂಗವಿಕಲರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ
ಇಂದಿನ ದಿನಮಾನಗಳಲ್ಲಿ ಬೆಲೆ ಏರಿಕೆಯಿಂದ 800 ರೂ. ಹಾಗೂ 1400 ರೂ. ಮಾಸಾಶನ ಯಾವುದಕ್ಕೂ ಸಾಕಾಗುತ್ತಿಲ್ಲ. ಐದು ಸಾವಿರ ರೂ. ಮಾಸಾಶನ ನಿಗದಿಗೊಳಿಸಬೇಕು. ಸರ್ಕಾರ 21 ಬಗೆಯ ನ್ಯೂನತೆಯುಳ್ಳವರನ್ನು ಅಂಗವಿಕಲರೆಂದು ಪರಿಗಣಿಸಿದ್ದು, ಅಂಗವಿಕಲರ ಸಮಗ್ರ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಎಲ್ಲ ಸರ್ಕಾರಿ ಕಚೇರಿ ಮತ್ತು ಶಾಲಾ-ಕಾಲೇಜುಗಳಲ್ಲಿ ರ್ಯಾಂಪ್, ರೈಲಿಂಗ್, ಶೌಚಗೃಹ, ವ್ಹೀಲ್ ಚೇರ್ ಸೌಲಭ್ಯಕ್ಕಾಗಿ ಅನುದಾನ ಮೀಸಲಿಡಲು ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: SBI ಬ್ಯಾಂಕ್ಗೆ ಗೂಳಿ ಎಂಟ್ರಿ; ಹಣ ಇಡೋಕೆ ಬಂದಿದ್ಯಾ? ಅಂದ್ರು ನೆಟ್ಟಿಗರು
ರಿಯಾಯತಿ ಬಸ್ ಪಾಸ್ ಪ್ರಯಾಣ ಮಿತಿಯನ್ನು 250 ಕಿಮೀ.ಗೆ ವಿಸ್ತರಿಸಬೇಕು. ವಿವಾಹ ಪ್ರೋತ್ಸಾಹ ಧನ 3 ಲಕ್ಷ ರೂ.ಗೆ ಹೆಚ್ಚಿಸಬೇಕು. ರಾಜಸ್ಥಾನ ಮಾದರಿಯಲ್ಲಿ ನಗರ ಮತ್ತು ಗ್ರಾಮೀಣ ಸಂಸ್ಥೆಗಳಲ್ಲಿ ಅಂಗವಿಕಲರ ನಾಮನಿರ್ದೇಶನಕ್ಕೆ ಆದ್ಯತೆ ನೀಡಬೇಕು. ಸ್ವಯಂ ಉದ್ಯೋಗಕ್ಕಾಗಿ ವಿಶೇಷ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಯಿತು.
ಅಂಗವಿಕಲರ ಆರೈಕೆದಾರರಿಗೆ 5 ಸಾವಿರ ರೂ. ಆರೈಕೆ ಭತ್ಯೆ ಮತ್ತು ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಬೇಕು. ಪುನರ್ವಸತಿ ವಿಶೇಷ ಯೋಜನೆ ಜಾರಿಗೊಳಿಸಬೇಕು. ಗ್ರಾಪಂ, ಜಿಪಂನಲ್ಲಿ ಮೀಸಲಿಟ್ಟ ಶೇ. 5 ಅನುದಾನ 2020 ರಿಂದ ಬಳಕೆಯಾಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ಅಂಗವಿಕಲರು ಸಂಕಷ್ಟ ಎದುರಿಸುವಂತಾಗಿದ್ದು, ಬಳಕೆಗೆ ಸುತ್ತೋಲೆ ಹೊರಡಿಸಬೇಕು. ಅಂಗವಿಕಲರ ಸಮೀಕ್ಷೆ ನಡೆಸಬೇಕೆಂದು ಆಗ್ರಹಿಸಲಾಯಿತು. ಪ್ರಮುಖರಾದ ದಾವಲಮಲಿಕ್, ವೀರಭದ್ರಪ್ಪ, ಹುಸೇನ್ ಬಾಷಾ, ಅಮರೇಶ, ಮಂಜುನಾಥ, ಸಂಗಮೇಶ, ಪರಸಪ್ಪ ಇತರರು ಇದ್ದರು.