ಕಡೂರು: ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ವಿಪರೀತ ಮದ್ಯಸೇವಿಸಿ ಮುದ್ದೆ ಊಟ ಮಾಡಿದ ತಂದೆ-ಮಗಳಿಬ್ಬರೂ ಮೃತಪಟ್ಟಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ.
ದೊಡ್ಡಯಲ್ಲಪ್ಪ (75), ಯಲ್ಲಮ್ಮ (50) ಮೃತಪಟ್ಟ ದುರ್ದೈವಿಗಳು. ಸಣ್ಣಯಲ್ಲಪ್ಪ ಅಸ್ವಸ್ಥಗೊಂಡವರು.
ಡಿ.31ರ ರಾತ್ರಿ ವಿಪರೀತ ಮದ್ಯಸೇವಿಸಿದ್ದಾರೆ ಎನ್ನಲಾಗಿದ್ದು, ಮರುದಿನ ಯಲ್ಲಮ್ಮ ತಯಾರಿಸಿದ ಮುದ್ದೆ ಊಟವನ್ನು ದೊಡ್ಡಯಲ್ಲಪ್ಪ, ಸಹೋದರ ಸಣ್ಣಯಲ್ಲಪ್ಪ ಹಾಗೂ ಯಲ್ಲಮ್ಮ ಊಟ ಮಾಡಿದ್ದಾರೆ. ಬಳಿಕ ಹೊಟ್ಟೆನೋವು ಕಾಣಿಸಿಕೊಂಡು ನಿಶಕ್ತರಾಗಿದ್ದ ಮೂವರನ್ನೂ ಕುಟುಂಬಸ್ಥರು ತಾಲೂಕು ಆಸ್ಪತ್ರೆಗೆ ದಾಖಲಿಸಿದರು. ದೊಡ್ಡಯಲ್ಲಪ್ಪ ಮತ್ತು ಯಲ್ಲಮ್ಮ ಮೃತಪಟ್ಟಿದ್ದು, ಸಣ್ಣಯಲ್ಲಪ್ಪನನ್ನು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಅಳಿದುಳಿದ ಮುದ್ದೆ ಆಹಾರವನ್ನು ಕೋಳಿಮರಿಗಳು ಸೇವಿಸಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮುದ್ದೆ ಊಟ ಮಾಡಿ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತಗೊಂಡಿದೆ.
ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಎಫ್ಎಸ್ಐಎಲ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪಿಎಸ್ಐ ಧನಂಜಯ್ ಜಯವಾಣಿಗೆ ಮಾಹಿತಿ ನೀಡಿದ್ದಾರೆ. ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.