ಚಿತ್ರದುರ್ಗ: ಬೇಡಿಕೆಗಳನ್ನು ಈಡೇರಿಸಲು ದುಡ್ಡಿಲ್ಲ ಎಂದಾದರೆ ಭಿಕ್ಷೆ ಎತ್ತಿ ಬೊಕ್ಕಸ ಭರ್ತಿ ಮಾಡುತ್ತೇವೆಂದು ರೈತರು, ಶುಕ್ರವಾರ ನಗರದಲ್ಲಿ ಭಿಕ್ಷೆ ಎತ್ತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟಿಸಿದರು. ರೈತರ ಸಮಸ್ಯೆಗಳನ್ನು ನಿರ್ಲಕ್ಷ್ಯ ವಹಿಸಿರುವ ಈ ಎರಡೂ ಸರ್ಕಾರಗಳು ದಿವಾಳಿಯಾಗಿವೆ ಎಂದು ಆರೋಪಿಸಿ ಎಪಿಎಂಸಿ ರೈತ ಭ ವನದಿಂದ ಡಿಸಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.
ಈ ವೇಳೆ ಭಿಕ್ಷೆ ಎತ್ತಿದ್ದ ಮೊತ್ತ 4720 ರೂಪಾಯಿಯನ್ನು ಅಂಚೆ ಕಚೇರಿ ಮೂಲಕ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಕಳಿಸಿದರು. ಉತ್ತರ ಕರ್ನಾಟಕ ರೈತರು ನಿರಂತರ ಬರಗಾಲ, ಕಳೆದ ಎರಡು ವರ್ಷಗಳಿಂದ ಪ್ರವಾಹದ ಸಂಕಷ್ಟಕ್ಕೆ ಈಡಾಗಿದ್ದಾರೆ. ಕರೊನಾದಿಂದಾಗಿ ಅವರ ತೊಂದರೆಗಳು ಇನ್ನೂ ಹೆಚ್ಚಾಗಿವೆ. ಆದರೂ ಸರ್ಕಾರಗಳು ಅಲ್ಲಿಯ ರೈತರಿಗೆ ಸೂಕ್ತ ನೆರವಿಗೆ ಧಾವಿಸಿಲ್ಲವೆಂದು ದೂರಿದ ರೈತ ಪ್ರಮುಖರು, ಸಮಸ್ಯೆ ಇತ್ಯರ್ಥಕ್ಕಾಗಿ ರೈತ ಮುಖಂಡರ ಸಭೆ ಕರೆಯಬೇಕೆಂದು ಒತ್ತಾಯಿಸಿದರು.
ಪ್ರವಾಹ ಪೀಡಿತ ಪ್ರದೇಶಗಳ ರೈತರ ಸಂಪೂರ್ಣ ಸಾಲ ಮನ್ನಾ, ಎನ್ಡಿಆರ್ಎಫ್ ನಿಯಾಮಾವಳಿ ಬದಲಿಸಿ ಪೂರ್ಣ ಬೆಳೆ, ಮನೆ ಇತ್ಯಾದಿ ನಷ್ಟಕ್ಕೆ ಪರಿಹಾರ ಕೊಡ ಬೇಕು. ಅತಿವೃಷ್ಠಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಈರುಳ್ಳಿ, ಶೇಂಗಾ ಹಾಳಾಗಿದ್ದು, ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ಕೊಡಬೇಕು. ಮೆಕ್ಕೆಜೋಳ, ಶೇಂಗಾ ಮೊದಲಾದ ಬೆಳಗಳ ಖರೀದಿಗೆ ಕೂಡಲೇ ಕೇಂದ್ರಗಳನ್ನು ಆರಂಭಿಸಬೇಕು. ಹಾಲಿನ ಬೆಲೆ ಮೊದಲಿಂತೆ ನಿಗದಿ ಪಡಿಸಬೇಕು. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳನ್ನು ಕೊಳ್ಳದಂತೆ ಪಂಜಾಬ್ ಮಾದರಿ ರಾಜ್ಯದಲ್ಲೂ ಕಾನೂನು ಜಾರಿಗೊಳಿಸ ಬೇಕೆಂದು ಆಗ್ರಹಿಸಿ ಎಡಿಸಿ ಸಿ.ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.
ನಕಲಿ ಆಧಾರ್, ಪಡಿತರ ಚೀಟಿಗಳ ಮುದ್ರಣ ಕೇಂದ್ರವಾಗಿತ್ತು ಎಐಎಂಐಎಂ ನಾಯಕನ ಮನೆ !