ವಿಜಯವಾಣಿ ಸುದ್ದಿಜಾಲ ನೆಲಮಂಗಲ
ರೈತರು ದೇಶಕ್ಕೆ ಆಧಾರ ಸ್ತಂಭವಿದ್ದಂತೆ, ರೈತರಿಲ್ಲದ ಬದುಕನ್ನು ಊಹಿಸಲು ಸಾಧ್ಯವಿಲ್ಲ ಎಂದು ಕೃಷಿಕ ಸಮಾಜದ ನಿರ್ದೇಶಕ ಗಂಗಾಧರ್ ಕಾಸರಘಟ್ಟ ಅಭಿಪ್ರಾಯಪಟ್ಟರು.
ನಗರದ ಕವಾಡಿ ಮಠದ ಶ್ರೀ ವೀರಭದ್ರೇಶ್ವರ ಪ್ರಾರ್ಥನಾ ಮಂದಿರದಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜ ಹಮ್ಮಿಕೊಂಡಿದ್ದ ರೈತರ ದಿನ ಮತ್ತು ಕಿಸಾನ್ಗೋಷ್ಠಿ-2023 ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ 5ನೇ ಪ್ರಧಾನ ಮಂತ್ರಿಯಾಗಿದ್ದ ಚೌದರಿ ಚರಣ್ಸಿಂಗ್ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ರೈತಪರ ಹೋರಾಟ ಮಾಡಿ ಅನೇಕ ಸುಧಾರಣೆಗಳಿಗೆ ಕಾರಣವಾಗಿದ್ದ ಅವರ ಜನ್ಮದಿನದಂದು ಕಿಸಾನ್ ದಿನವನ್ನಾಗಿ ಆಚರಣೆ ಮಾಡುತ್ತಿದ್ದು, ರೈತ ಸಮುದಾಯಕ್ಕೆ ಇಡೀ ದೇಶವೆ ಗೌರವ ಸಲ್ಲಿಸುತ್ತಿದೆ ಎಂದರು.
ರೈತರಿಗಾಗಿ ಕೃಷಿ ಇಲಾಖೆಯಲ್ಲಿನ ಯೋಜನೆಗಳು ಸೌಲಭ್ಯಗಳ ಕುರಿತಾದ ಮಾಹಿತಿ ಹಂಚುವುದರ ಜತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ. ತಾಲೂಕಿನ ಎಲ್ಲ ರೈತರು ಕೃಷಿ ಇಲಾಖೆ ಸೇರಿ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ರೈತರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ಶ್ರಮಿಸುತ್ತಿದ್ದು, ಅವರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ವೃಷಭಾವತಿ ಯೋಜನೆಗೆ ಸರ್ಕಾರ 1,081ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಆರಂಭಿಕವಾಗಿ ತಾಲೂಕಿನ 54 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುವುದು ಎಂದರು.
ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇದ್ದು ರೈತರು ಮನವಿ ಹಿನ್ನೆಲೆ ಸರ್ಕಾರದ ಗಮನಕ್ಕೆ ತಂದು 250 ಕೋಟಿ ರೂ. ವೆಚ್ಚದಲ್ಲಿ 220ಕೆವಿ ಉಪಕೇಂದ್ರ ನಿರ್ಮಾಣಕ್ಕೆ ಅನುದಾನ ಮಂಜುರಾಗಿದ್ದು, ಸಿಎಂ ಹಾಗೂ ಡಿಸಿಎಂ ಅವರಿಂದ ಭೂಮಿಪೂಜೆ ಮಾಡಿ ಕಾಮಗಾರಿ ಆರಂಭಿಸಲಾಗುವುದು ಎಂದರು.
ತಹಸೀಲ್ದಾರ್ ಕೆ. ಅರುಂಧತಿ, ಇಒ ಎಲ್.ಮಧು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ, ಕೃಷಿ ಅಧಿಕಾರಿ ನವೀನಾ, ಅಂಜನಾ, ಶಬಾನು, ತಾಲೂಕು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಹೊನ್ನಸಿದ್ದಪ್ಪ, ಖಜಾಂಚಿ ಗುರುರಾಜ್, ಪ್ರಧಾನ ಕಾರ್ಯದರ್ಶಿ ಚನ್ನೇಗೌಡ, ನಿರ್ದೇಶಕ ಪುರುಷೋತ್ತಮ್, ಗಂಗಾಧರ್, ರಾಮಚಂದ್ರಯ್ಯ, ಕೆಂಪಮ್ಮ, ಮುಖಂಡ ಮುನಿಯಪ್ಪ, ನಾರಾಯಣ್ಗೌಡ, ನಾಗರಾಜು ಇದ್ದರು.