ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಂತೆಯಲ್ಲಿ ಬಿತ್ತನೆ ಸಣ್ಣಈರುಳ್ಳಿಯ ಬೆಲೆ ಇಳಿಕೆಗೆ ಒತ್ತಾಯಿಸಿ ರೈತರು ಮಾರಾಟಗಾರರೊಂದಿಗೆ ಜತೆ ಜಟಾಪಟಿ ನಡೆಸಿದರು.
ಗುರುವಾರ ನಡೆದ ಸಂತೆಯಲ್ಲಿ ಬಿತ್ತನೆ ಈರುಳ್ಳಿಗೆ ಕ್ವಿಂಟಾಲ್ಗೆ 7 ಸಾವಿರ ರೂ. ನಿಗದಿಪಡಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಯಿತು. ವಿವಿಧ ಗುಣಮಟ್ಟದ ಬಿತ್ತನೆ ಈರುಳ್ಳಿಗೂ ಒಂದೇ ದರ ನಿಗದಿಪಡಿಸಿರುವುದು ಸರಿಯಲ್ಲ ಎಂದು ವ್ಯಾಪಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರೈತರು ಸಣ್ಣ ಈರುಳ್ಳಿ ಬಿತ್ತನೆಗೆ ಮುಂದಾದ ಪರಿಣಾಮ ಮಾರಾಟಗಾರರು ಪ್ರತಿ ವಾರವೂ ಸಂತೆಯಲ್ಲಿ ಬೆಲೆ ಏರಿಕೆ ಮಾಡುತ್ತಲೇ ಇದ್ದಾರೆ. ಆದ್ದರಿಂದ ಅಧಿಕಾರಿಗಳು ಬೆಲೆ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾರಾಟಕ್ಕೆ ಅಡ್ಡಿಯುಂಟು ಮಾಡಿದರು.
ವಿಷಯ ತಿಳಿದ ತಹಸೀಲ್ದಾರ್ ರಮೇಶ್ಬಾಬು ಸಂತೆಗೆ ಆಗಮಿಸಿ ಗುಣಮಟ್ಟಕ್ಕೆ ತಕ್ಕಂತೆ ದರ ನಿಗದಿಗೊಳಿಸಿ ಬಿತ್ತನೆ ಈರುಳ್ಳಿಯನ್ನು ಮಾರಾಟ ಮಾಡಲು ವ್ಯಾಪಾರಿಗಳಿಗೆ ಸೂಚಿಸಿದರು. ನಂತರ ಬಿತ್ತನೆ ಈರುಳ್ಳಿಯ ಗುಣಮಟ್ಟದ ಆಧಾರದ ಮೇಲೆ ಕ್ವಿಂಟಾಲ್ಗೆ 4 ರಿಂದ 5 ಸಾವಿರ ರೂ.ವರೆಗೆ ಮಾರಾಟ ಮಾಡಲಾಯಿತು.