ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಾಗಿದ್ದು, ಎಡದಂಡೆ ಭಾಗದ ಬೆಳೆಗಳಿಗೆ ಸಮಸ್ಯೆಯಾಗಲಿದೆ. ಅಧಿಕಾರಿಗಳ ನಿರ್ಲಕ್ಷೃ ಖಂಡಿಸಿ ಮಾ.3ರಂದು ಮುನಿರಾಬಾದ್ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಅಮರೇಶ ಚಾಗಬಾವಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸದ್ಯ ಜಲಾಶಯದಲ್ಲಿ 28 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕುಡಿವ ನೀರು, ಡೆಡ್ ಸ್ಟೋರೇಜ್ ಹೊರತುಪಡಿಸಿದಲ್ಲಿ ಈಗಿರುವ ನೀರು ಮಾ.25ರ ವೇಳೆಗೆ ಖಾಲಿಯಾಗಲಿದೆ. ಬೆಳೆಗಳು ಕೊಯ್ಲಿಗೆ ಬರಲು ಏಪ್ರಿಲ್ 10ವರೆಗೆ ನೀರು ಅವಶ್ಯ. ಈಗಲೇ ಕೊನೇ ಭಾಗದ ರೈತರಿಗೆ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಕೂಡಲೇ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಚಿವ ಆನಂದ ಸಿಂಗ್ ಅಧಿಕಾರಿಗಳ ಸಭೆ ಕರೆದು ಪರಿಹಾರ ಕ್ರಮ ಹುಡುಕಬೇಕು. ಆದರೆ, ಜನಪ್ರತಿನಿಧಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು ದೂರಿದರು.
ಭದ್ರಾ ಡ್ಯಾಮ್ನಿಂದ 8 ಟಿಎಂಸಿ ನೀರು ತರುವುದಾಗಿ ಹೇಳಿದ್ದರೂ ಸರ್ಕಾರ ಈವರೆಗೆ ಕ್ರಮ ಕೈಗೊಂಡಿಲ್ಲ. ಸದ್ಯ ಜಲಾಶಯದಲ್ಲಿ ಇರುವ ನೀರನ್ನೇ ಆಫ್ ಆ್ಯಂಡ್ ಆನ್ ಮಾದರಿಯಲ್ಲಿ ನಿರ್ವಹಣೆ ಮಾಡಲು ಅವಕಾಶವಿದೆ. ಮೇಲ್ಭಾಗದಲ್ಲಿ ಅಕ್ರಮ ನೀರು ಕಳ್ಳತನಕ್ಕೆ ಬ್ರೇಕ್ ಹಾಕಬೇಕಿದೆ. ಇಲ್ಲಿರುವ ಅಧಿಕಾರಿಗಳನ್ನು ರಾಯಚೂರಿಗೆ, ಅಲ್ಲಿನ ಅಧಿಕಾರಿಗಳನ್ನು ಕೊಪ್ಪಳ ಜಿಲ್ಲಾ ವಿಭಾಗಗಳಿಗೆ ವರ್ಗಾವಣೆ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು. ರೈತರಾದ ಹನುಮಂತಪ್ಪ ಉಳೇನೂರು, ಹುಲುಗಪ್ಪ ಮುಕ್ಕುಂಪಿ, ಜಯನಗೌಡ ಮುಕ್ಕುಂಪಿ ಇದ್ದರು.