ಚಿಕ್ಕೋಡಿ: ಸೋಮವಾರ ಲಾಕ್ಡೌನ್ ಸಡಿಲಿಕೆಗೊಂಡು ಮದ್ಯ, ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಜನರು ಭಾರಿ ಪ್ರಮಾಣದಲ್ಲಿ ರಸ್ತೆಗಿಳಿದಿದ್ದರು. ಇದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ಆದ್ದರಿಂದ ಮೇ 17ರವರೆಗೆ ಚಿಕ್ಕೋಡಿ ಪಟ್ಟಣದಲ್ಲಿ ಲಾಕ್ಡೌನ್ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಜಗದೀಶ ಕವಟಗಿಮಠ ಹೇಳಿದ್ದಾರೆ.
ಪಟ್ಟಣದ ಪುರಸಭೆ ಆವರಣದಲ್ಲಿ: ಲಾಕ್ಡೌನ್ ಆದೇಶ ಚಿಕ್ಕೋಡಿಯಲ್ಲಿ ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬುದರ ಸಂಬಂಧ ಹಮ್ಮಿಕೊಂಡಿದ್ದ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿ, ಜನರ ಹಿತದೃಷ್ಟಿಯಿಂದ ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಬಂದ್ ಮಾಡುವುದು ಉತ್ತಮ. ಅಂಗಡಿ ಮಾಲೀಕರು ಈ ನಿರ್ಧಾರಕ್ಕೆ ಒಪ್ಪಿಗೆ ನೀಡಬೇಕು ಎಂದರು. ಇದಕ್ಕೆ ಸ್ಪಂದಿಸಿದ ಜವಳಿ, ಸ್ಟೇಷನರಿ ಮತ್ತಿತರ ಅಂಗಡಿ ಮಾಲೀಕರು ಮೇ 17ರ ವರೆಗೆ ಸರ್ಕಾರದ ಲಾಕ್ಡೌನ್ ಆದೇಶ ಪಾಲಿಸುವುದಾಗಿ ತಿಳಿಸಿದರು.
ಸಂಜಯ ಅಡಕೆ, ವರ್ಧಮಾನ ಸದಲಗೆ, ಗುಲಾಬಹುಸೇನ ಬಾಗವಾನ್, ಪ್ರವೀಣ ಕಾಂಬಳೆ, ಸಂಜಯ ಅರಗೆ, ವಿಶ್ವನಾಥ ಕಾಮಗೌಡ, ಪಪಂ ಮುಖ್ಯಾಧಿಕಾರಿ ಡಾ.ಸುಂದರ ರೋಗಿ ಇತರರು ಇದ್ದರು.