ತಿರುವನಂತಪುರಂ: ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಇರುವ ಸಲಿಂಗಿಯ ಮೃತದೇಹವನ್ನು ಪಡೆಯಲು ಹಾಗೂ ವೈದ್ಯಕೀಯ ವೆಚ್ಚವನ್ನು ಭರಿಸಲು ಕುಟುಂಬವೂ ನಿರಾಕರಿಸಿದ ಬಳಿಕ ಮೃತದೇಹವನ್ನು ಪಡೆಯಲು ಸಲಿಂಗ ಸಂಗಾತಿ ಮುಂದೆ ಬಂದಿದ್ದು, ಅನುಮತಿ ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೈಕೋರ್ಟ್ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವ ದಿನ ಕುಟುಂಬದ ಸದಸ್ಯರ ಮುಂದೆ ಹಾಜರಾಗುವಂತೆ ಸಲಿಂಗಿ ಸಂಗಾತಿಗೆ ಸೂಚಿಸಲಾಗಿದೆ. ಅರ್ಜಿದಾರ ಜೆಬಿನ್ ತನ್ನ ಸಂಗಾತಿ ಮನು ಜೊತೆ ಕೊಚ್ಚಿಯಲ್ಲಿ ವಾಸಿಸುತ್ತಿದ್ದ. ಫೆಬ್ರವರಿ 2ರಂದು ಮನು ತಮ್ಮ ನಿವಾಸದ ಟೆರೇಸ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎರಡು ದಿನಗಳ ಕಾಲ ವೆಂಟಿಲೇಟರ್ನಲ್ಲಿದ್ದ ಮನು, ಫೆಬ್ರವರಿ 4ರ ರಾತ್ರಿ ನಿಧನರಾದರು. ಮನು ಅವರ ದೇಹವನ್ನು ಪಡೆಯಲು ಕುಟುಂಬದವರು ಸೇರಿದಂತೆ ಯಾರೊಬ್ಬರು ಮುಂದೆ ಬಾರದ ಕಾರಣ ಎರಡು ದಿನಗಳವರೆಗೆ ಮೃತದೇಹ ಆಸ್ಪತ್ರೆಯಲ್ಲೇ ಉಳಿಯಿತು. ಜೆಬಿನ್ ಅವರು ಮೃತದೇಹ ಪಡೆಯಲು ಮುಂದೆ ಬಂದರೂ ಕಾನೂನು ಅವರನ್ನು ಉತ್ತರಾಧಿಕಾರಿ ಎಂದು ಗುರುತಿಸಲಿಲ್ಲ.
ಇದಾದ ಬಳಿಕ ಜೆಬಿನ್, ತನ್ನ ಸಂಗಾತಿಯ ಮೃತದೇಹವನ್ನು ಪಡೆಯಲು ಅನುಮತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಸಂಗಾತಿ ಮೃತದೇಹ ನನಗೊಪ್ಪಿಸಿ ಎಂದು ಕಣ್ಣೀರು ಹಾಕಿದ್ದಾರೆ. ಹೈಕೋರ್ಟ್ ಕೂಡಲೇ ಅರ್ಜಿಯನ್ನು ಪರಿಶೀಲಿಸಿ ಖಾಸಗಿ ಆಸ್ಪತ್ರೆಗೆ ಇಮೇಲ್ ಮೂಲಕ ನೋಟಿಸ್ ಕಳುಹಿಸಿದೆ. ಫೆಬ್ರವರಿ 6 ರಂದು ವಿಚಾರಣೆಯ ಸಂದರ್ಭದಲ್ಲಿ ಹಕ್ಕು ಪಡೆಯದ ದೇಹಗಳಿಗೆ ಸರ್ಕಾರಿ ಪ್ರೋಟೋಕಾಲ್ ಬಗ್ಗೆ ವಿವರಣೆಯನ್ನು ಹೈಕೋರ್ಟ್ ಕೋರಿತು.
ಪ್ರೋಟೋಕಾಲ್ ಪ್ರಕಾರ ಸ್ವಂತ ಅಥವಾ ಜೈವಿಕ ಕುಟುಂಬದ ಸದಸ್ಯರು ಅಥವಾ ಕಾನೂನು ಉತ್ತರಾಧಿಕಾರಿಗಳು ದೇಹವನ್ನು ಪಡೆಯಲು ವಿಫಲವಾದಾಗ, ಆ ದೇಹವನ್ನು ಸಾಮಾನ್ಯವಾಗಿ ವೈದ್ಯಕೀಯ ಸಂಶೋಧನೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಗುತ್ತದೆ.
ಜೆಬಿನ್ ಅವರ ಪರ ವಕಾಲತು ವಹಿಸಿದ ಕೇರಳದ ಮೊದಲ ಟ್ರಾನ್ಸ್ಜೆಂಡರ್ ವಕೀಲರಾದ ಪದ್ಮಾ ಲಕ್ಷ್ಮಿ, ಇದು ಸಲಿಂಗಿ ವ್ಯಕ್ತಿಯ ಹಕ್ಕುಗಳಿಗೆ ಸಂಬಂಧಿಸಿದೆ ಮತ್ತು ಮನು ದೇಹವು ಪ್ರತಿ ಧಾರ್ಮಿಕ ಆಚರಣೆ ಸ್ವೀಕರಿಸುವ ಹಕ್ಕನ್ನು ಹೊಂದಿದೆ ಎಂದು ಪ್ರತಿಪಾದಿಸಿದರು. (ಏಜೆನ್ಸೀಸ್)
ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್ ಆಗೋದು ಹೇಗೆ? Vijayavani.net ಫಾಲೋ ಮಾಡಿ ಪರೀಕ್ಷೆಗೆ ಭರ್ಜರಿ ತಯಾರಿ ನಡೆಸಿ
3 ಸೆಕೆಂಡ್ ವಿಡಿಯೋ, 1 ವಾರಕ್ಕೆ 120 ಕೋಟಿ ರೂ. ಗಳಿಕೆ: ಈಕೆಯ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ