ಎನ್.ಆರ್.ಪುರ: ವೇದ, ಉಪನಿಷತ್ತುಗಳು ಹಾಗೂ ಶಾಸ್ತ್ರಗಳು ಕುಟುಂಬದ ಶ್ರೇಯೋಭಿವೃದ್ಧಿ ಬಯಸುತ್ತವೆ ಎಂದು ಬಸ್ತಿಮಠ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅರಿಶಿನಗೆರೆಯಲ್ಲಿ ಸೋಮವಾರ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ದೇವಸ್ಥಾನ ಶಿಖರ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿ, ಶಾಲೆ, ಕಾಲೇಜುಗಳು ಇರದ ಕಾಲದಲ್ಲಿ ಪೂರ್ವಜರು ಸತ್ಯ, ನಿಷ್ಠೆ, ಧರ್ಮದಲ್ಲಿ ನಡೆಯುತ್ತಿದ್ದರು. ಅಂದು ಶಾಂತಿ, ನೆಮ್ಮದಿ, ಸಮಾಧಾನ ಇತ್ತು. ಮಠ ಮಂದಿರಗಳಲ್ಲಿ ಸಿಗುವ ವೇದ, ಉಪನಿಷತ್ತುಗಳ ಪಾಠಗಳೇ ಶಿಕ್ಷಣವಾಗಿದ್ದವು. ಅವು ಜ್ಞಾನ ಹೆಚ್ಚಿಸುತ್ತಿದ್ದವು. ದೇವಾಲಯಗಳಲ್ಲಿ ಪೂಜೆಗಳಿಂದ ಸಮೃದ್ಧಿ ಹೊಂದಿದರೆ ಮಾತ್ರೆ ಗ್ರಾಮಗಳು ಅಭಿವೃದ್ಧಿಯಾಗುತ್ತವೆ. ದೇವರ ಸಾನ್ನಿಧ್ಯಕ್ಕೆ, ಗುರು ಸಾನ್ನಿಧ್ಯಕ್ಕೆ ಬರಿ ಕೈಯಲ್ಲಿ ಹೋಗಬಾರದು. ಪುರಾಣ ಪ್ರವಚನಗಳಿಗೆ ಹೋಗುವವರು ನಿಷ್ಕಲ್ಮಷ ಮನಸ್ಸಿನಿಂದ ಹೋಗಿ ಎಂದರು.
ಪ್ರಧಾನ ಪುರೋಹಿತ ಲಕ್ಷ್ಮೀಪ್ರಸಾದ್ ಭಟ್ ಮಾತನಾಡಿ, ದೇವಾಲಯ ಪ್ರಾರಂಭೋತ್ಸವ, ವಿಗ್ರಹಗಳು ಪ್ರತಿಷ್ಠಾಪನೆ ಆದರೆ ಸಾಲದು. ಕಾಲ ಕಾಲಕ್ಕೆ ಪೂಜೆ ನೆರವೇರಬೇಕು. ದುರ್ಗುಣಗಳು ದೂರವಾಗಬೇಕು ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ, ಎನ್.ಆರ್.ಪುರ ಯೋಜನಾಧಿಕಾರಿ ಎಂ.ಆರ್.ನಿರಂಜನ್ ಮಾತನಾಡಿ, ದಿನ ನಿತ್ಯ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರೆ ಮಾತ್ರ ದೇವರು ಕಷ್ಟಗಳನ್ನು ದೂರ ಮಾಡಬಲ್ಲ ಎಂದು ಅಭಿಪ್ರಾಯ ಪಟ್ಟರು.
ದೇವಸ್ಥಾನ ಸಮಿತಿ ಅಧ್ಯಕ್ಷ ಭೀಮನರಿ ಸುಧಾಕರ, ದೇವಾಲಯದ ಪ್ರಮುಖ ದಾನಿಗಳನ್ನು ಗೌರವಿಸಲಾಯಿತು. ಮೂರು ದಿನಗಳ ಪೂಜೆಯನ್ನು ಉಡುಪಿ ಶ್ರೀ ಲಕ್ಷ್ಮೀಪ್ರಸಾದ್ ಮತ್ತು ಸಂಗಡಿಗರು ನೆರವೇರಿಸಿದರು.
ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್, ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಎ.ಎಸ್.ಮಂಜುನಾಥ್, ತಾಪಂ ಮಾಜಿ ಸದಸ್ಯ ಟಿ.ಪಿ.ಸುಧಾಕರ್ ಆಚಾರ್, ಸಮಿತಿ ಕಾರ್ಯದರ್ಶಿ ಎ.ಡಿ.ಉಮೇಶ್, ಎನ್.ಎಂ.ಕಾಂತರಾಜ್, ಎಸ್.ವಿ.ಗಾಯತ್ರಿ, ಎಂ.ಮಹೇಶ್ ಇತರರಿದ್ದರು.