ಆಲ್ದೂರು: ಆವತಿ ಹೋಬಳಿ ಕೆರೆಮಕ್ಕಿ ಗ್ರಾಮದ ರಾಮಮ್ಮ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ವಾತ್ಸಲ್ಯ ಯೋಜನೆಯಡಿ ನಿರ್ಮಿಸಿದ ಮನೆಯನ್ನು ಗುರುವಾರ ಯೋಜನೆ ಪ್ರಾದೇಶಿಕ ನಿರ್ದೇಶಕಿ ಗೀತಾ ಹಸ್ತಾಂತರಿಸಿದರು.
ಮನೆ ಹಸ್ತಾಂತರ ನಂತರ ಗೀತಾ ಮಾತನಾಡಿ, ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಯನ್ನು ವಾತ್ಸಲ್ಯ ಯೋಜನೆಯಡಿ ವಿಪತ್ತು ನಿರ್ವಹಣಾ ತಂಡ ದುರಸ್ತಿಗೊಳಿಸಿದೆ. ಯೋಜನೆಯಿಂದ ರಾಜ್ಯಾದ್ಯಂತ 51 ಕೋಟಿ ರೂಪಾಯಿ ವೆಚ್ಚದಲ್ಲಿ 702 ಕೆರೆಗಳನ್ನು ಪುನರುಜ್ಜೀವನಗೊಳಿಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಯೋಜನಾಧಿಕಾರಿ ಪ್ರಕಾಶ್ ರಾವ್ ಮಾತನಾಡಿ, ನಿರ್ಗತಿಕ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವುದರ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಾಗಿದೆ. ಇಳಿ ವಯಸ್ಸಿನಲ್ಲಿ ಕುಟುಂಬಕ್ಕೆ ನೆಮ್ಮದಿ ಬೇಕಾಗಿದೆ. ನೆಮ್ಮದಿಗೆ ಬೇಕಾದ ಸೂರನ್ನು ನಿರ್ಮಿಸಿರುವುದು ಹೆಮ್ಮೆ ಸಂಗತಿ ಎಂದರು.
ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ, ಆವತಿ ವಲಯ ಮೇಲ್ವಿಚಾರಕ ಮರುಳೇಶ್, ಒಕ್ಕೂಟದ ಅಧ್ಯಕ್ಷ ಹೊಂಬದಹಳ್ಳಿ ಶಶಿಧರ್, ಬೈಗೂರು ಗ್ರಾಪಂ ಸದಸ್ಯರಾದ ಗಿರೀಶ್, ಪುಷ್ಪರಾಜು, ಗೀತಾ, ಮಾಜಿ ಉಪಾಧ್ಯಕ್ಷ ಕೆರೆಮಕ್ಕಿ ಮಹೇಶ್, ಮಂಜುಳಾ, ಸೇವಾಪ್ರತಿನಿಧಿ ಹರೀಶ್ ಇತರರಿದ್ದರು.