ಗುರುಗುಂಟ : ಕಳೆದೆರಡು ದಿನಗಳಿಂದ ಸುರಿದ ಮಳೆಯು ಹಿಂಗಾರು ಬೆಳೆಗೆ ಪೂರಕ ಎಂಬ ಮಾತು ರೈತ ವಲಯದಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ಹಿಂಗಾರು ಹಂಗಾಮಿನ ವಲಯ ಸಂಶೋಧನೆ-ವಿಸ್ತರಣಾ ಕಾರ್ಯಾಗಾರ
ಎರೆಹೊಲದ ಹಿಂಗಾರು ಬೆಳೆಯಾದ ಕಡಲೆ, ಬಿಳಿಜೋಳ ಹಾಗೂ ನೀರಾವರಿ ಪ್ರದೇಶದ ಮಸಾರಿ ಜಮೀನಿಗೆ ಶೇಂಗಾ ಬಿತ್ತಲು ಹಾಗೂ ಮುಂಗಾರು ಬೆಳೆಯಾದ ತೊಗರಿಗೆ ತೇವಾಂಶದ ಅನುಕೂಲವಾಗಿದೆ.
ಮುಂಗಾರಿನಲ್ಲಿ ಸಕಾಲಕ್ಕೆ ಮಳೆ ಸುರಿಯದಿದ್ದರಿಂದ ರೈತ ಸೇರಿ ಜನ- ಜಾನುವಾರು ಸಂಕಷ್ಟಕ್ಕೆ ಸಿಲುಕಿದ್ದರು. ಕೃಷಿ ಬದುಕಿನ ಬಗ್ಗೆ ರೈತರಲ್ಲಿ ಚಿಂತೆ ಮನೆಮಾಡಿತ್ತು. ಕೃಷಿ ಕೆಲಸಕ್ಕೆ ವಿದಾಯ ಹೇಳಿ ಜಮೀನುಗಳನ್ನು ಲಿಸ್ಗೆ ಹಾಕಿ ಕೆಲಸ ಅರಸಿ ಗುಳೆ ಹೋಗಿದ್ದರು.
ತತ್ಪರಿಣಾಮ ಬೇಡಿಕೆಯಂತೆ ಕೃಷಿ ಕೂಲಿ ಕಾರ್ಮಿಕರು ಸಿಗದೇ ಪರ ಊರು, ಹಳ್ಳಿಗಳಿಂದ ಕರೆದುಕೊಂಡು ಬಂದು ದುಬಾರಿ ಕೂಲಿ ತೆತ್ತಿ ಕೈ ಸುಟ್ಟುಕೊಳ್ಳಬೇಕಾದದ್ದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿತ್ತು. ಸಕಾಲಕ್ಕೆ ಮಳೆಯಾಗದೆ ಬೆಳೆ ಬರದಿದ್ದರಿಂದ ಕೈಸುಟ್ಟುಕೊಂಡ ರೈತ ಜಮೀನು ಮಾಲೀಕರಿಗೆ ಲೀಸ್ ಹಣ ಪಂಗನಾಮ ಹಾಕಿದ್ದು ನಡೆದಿದೆ.
ಒಟ್ಟಾರೆ ಸಕಾಲಕ್ಕೆ ಬಾರದ ಮಳೆ, ಕೆಲ ಕಂಪನಿಗಳು ಕಳಪೆ ಮಟ್ಟದ ದಾಸ್ತಾನು ಮಾಡಿದ ಬೀಜದಿಂದ ಉಳುಮೆ ಮಾಡಿದ ರೈತನಿಗೆ ನಿರೀಕ್ಷಿಸಿದಷ್ಟು ಬೆಳೆ ಕೈಗೆ ಸಿಗದೇ ನಷ್ಟ್ಟುಕ್ಕೆ ಸಿಲುಕಿ ಕೃಷಿ ಸಹವಾಸವೇ ಬೇಡ ಎಂದು ರೈತ ಸಮೂಹ ದೂರ ಉಳಿದಿವೆ. ಹೀಗಾಗಿ ನೆರೆ ರಾಜ್ಯದ ಆಂದ್ರಿಗರು ಈ ಭಾಗದಲ್ಲಿ ಕೃಷಿಗಾಗಿ ನೆಲೆ ಊರಿದ್ದು ಕಂಡುಬರುತ್ತಿದೆ.
ಹಿಂಗಾರು ಬೆಳೆಗೆ ಮಳೆ ಆಶಾದಾಯಕ ಬೆಳವಣಿಗೆಗೆ ಚಿಗುರೊಡೆಸಿದೆ. ಎರೆಹೊಲಕ್ಕೆ ಹಿಂಗಾರು ಬೆಳೆಯಾದ ಕಡಲೆ, ಬಿಳಿಜೋಳ ಬಿತ್ತಲು ಅನುಕೂಲವಾಗಿದೆ. ಮಳೆಗೆ ಹುಟ್ಟಿಸಿದಷ್ಟು ತೆನೆಕಾಳು ಎಂಬ ವಾಡಿಕೆಯಂತೆ ಮಸಾರಿಯ ಮುಂಗಾರಿನ ಸಜ್ಜೆ,ತೊಗರಿ ಸದ್ಯ ಕಾಳು ಎಷ್ಟು ಬಿಟ್ಟಿದೆಯೋ ಅಷ್ಟೆ ಎಂಬುದು ಜನಜನಿತ.
ರಾಮಜಿ ಬುರೇರ್, ರೈತ ಮೂಡಲಗಸಿ.