ಶಿಕಾರಿಪುರ: ಮಹಾ ಶಿವರಾತ್ರಿಯ ಪ್ರಯುಕ್ತ ಸಮೀಪದ ಶ್ರೀಕ್ಷೇತ್ರ ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ ಹಾಗೂ ಮಳೆ ಹಿರೇಮಠದ ಕಿರಿಯ ಶ್ರೀಗಳಾದ ಶ್ರೀ ಮಹಾಂತ ದೇಶೀಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸ್ವಾಮಿಗೆ ಮಹಾ ರುದ್ರಾಭಿಷೇಕ, ವಿಶೇಷ ಅಲಂಕಾರ, ಪೂಜೆ ಸಾಂಪ್ರದಾಯಿಕವಾಗಿ ನೆರವೇರಿದವು.
ಆಶೀರ್ವಚನ ನೀಡಿದ ಶ್ರೀ ಚನ್ನವೀರದೇಶೀಕೇಂದ್ರ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಭಕ್ತರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಮಾ.20, 21ರಂದು ಕ್ಷೇತ್ರದಲ್ಲಿ ಜಾತ್ರೆಯಿರುವ ಕಾರಣ ತಮಿಳುನಾಡಿನ ವಿಶಿಷ್ಟ ಶೈಲಿಯ ಮಹಾದ್ವಾರಕ್ಕೆ ಬಣ್ಣದ ಕಾರ್ಯ ನಡೆಯುತ್ತಿದೆ. ಮಾ.21ರ ದೊಡ್ಡ ರಥೋತ್ಸವದ ದಿನ ಲಕ್ಷಾಂತರ ಭಕ್ತರು ಸೇರುತ್ತಾರೆ. ಕೆಳದಿ ಅರಸರ ಕಾಲದಲ್ಲಿ ಈ ದೇವಾಲಯಕ್ಕೆ ಕಾಯಕಲ್ಪ ನೀಡಲಾಗಿದೆ. ದೇವಳದ ಇಕ್ಕೆಲಗಳಲ್ಲಿ ಕಾಶಿ ಮತ್ತು ಉಜ್ಜಯಿನಿ ಪೀಠದ ಶಾಖಾ ಮಠಗಳಾದ ಪಂಚವಣ್ಣಿಗೆ ಮತ್ತು ಮಳೆ ಹಿರೇಮಠಗಳಿವೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರ ಕಳಕಳಿಯಿಂದ ಬಂದ ಅನುದಾನದಿಂದ ದೇವಸ್ಥಾನ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದರು.
ಮಹಾ ಶಿವರಾತ್ರಿ ನಾವು ಶಿವನಿಗಾಗಿಯೇ ಮೀಸಲಿಡುವ ಆರಾಧನೆಯ ರಾತ್ರಿ. ಭಕ್ತರ ಕೂಗಿಗೆ ಅತಿ ಬೇಗ ಫಲ ಕೊಡುವವನು ಶಿವ. ಪರಶಿವನು ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹೆಸರಿನಲ್ಲಿ ತೊಗರ್ಸಿ ಕ್ಷೇತ್ರದಲ್ಲಿ ನೆಲೆನಿಂತು ಭಕ್ತೋದ್ಧಾರ ಮಾಡುತ್ತಿದ್ದಾನೆ ಎಂದು ಹೇಳಿದರು.