ಹುಬ್ಬಳ್ಳಿ: ಟ್ರ್ಯಾಕ್ಟರ್ ಟ್ರೇಲರ್ ನಿರ್ಮಾಣಕ್ಕೆ ಆರ್ಡರ್ ಪಡೆದು ಮುಂಗಡವಾಗಿ ಲಕ್ಷಾಂತರ ರೂ. ಪಡೆದು ಟ್ರೇಲರ್ ಕೊಡದೇ ಸತಾಯಿಸುತ್ತಿದ್ದ ಫ್ಯಾಕ್ಟರಿ ಮಾಲೀಕನನ್ನೇ ಮಹಾರಾಷ್ಟ್ರ ಮೂಲದ 7 ಜನರ ತಂಡ ಅಪಹರಿಸಿದ್ದ ಘಟನೆ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಗೋಕುಲ ಕೈಗಾರಿಕಾ ಪ್ರದೇಶದ ಕೃಷಿ ಇಂಪ್ಲಿಮೆಂಟ್ ಮತ್ತು ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಪರಶುರಾಮ ನೂಲ್ವಿ ಅಪಹರಣಕ್ಕೀಡಾಗಿದ್ದವರು. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ್ ತಾಲೂಕಿನ ಮುತ್ನಾಲ ಗ್ರಾಮದ ಕೆಲವರು ಟ್ರಾಕ್ಟರ್ ಟ್ರೇಲರ್ ತಯಾರಿಸಲು ಪರಶುರಾಮ ಅವರ ಫ್ಯಾಕ್ಟರಿಗೆ ಆರ್ಡರ್ ಕೊಟ್ಟಿದ್ದರು. ಇದಕ್ಕಾಗಿ ಮುಂಗಡವಾಗಿ ಹಣ ನೀಡಿದ್ದರು. ಹಲವು ಬಾರಿ ಹುಬ್ಬಳ್ಳಿಗೆ ಬಂದು ಹೋಗಿದ್ದರೂ ಟ್ರೇಲರ್ ನಿಮಿರ್ಸಿರಲಿಲ್ಲ. ಜು.19ರಂದು ಕೂಡ ಕೆಲಸ ಆಗಿರಲಿಲ್ಲ. ಇದರಿಂದ ಬೇಸತ್ತ 7 ಜನರಿದ್ದ ತಂಡ ಪರಶುರಾಮ ಅವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಪರಾರಿಯಾಗಿದ್ದರು.
ಮಹಾರಾಷ್ಟ್ರದ 7 ಜನರ ಬಂಧನ
ಅಪಹರಣದ ಕುರಿತು ಫ್ಯಾಕ್ಟರಿಯವರು ಗೋಕುಲ ರೋಡ್ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದರು. ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ಕೂಡಲೇ ಕಾರ್ಯಪ್ರವೃತ್ತರಾದರು. ಬೆಳಗಾವಿ ಗಡಿ ಭಾಗದ ಹಾಗೂ ಮಹಾರಾಷ್ಟ್ರದ ಗಡಹಿಂಗ್ಲಜ್ ಪೊಲೀಸರಿಗೆ ಈ ಕುರಿತು ಮಾಹಿತಿ ರವಾನಿಸಿದ್ದರು. ಅವರ ಸಹಾಯದಿಂದ ಆರೋಪಿತರನ್ನು ಮೂರು ಗಂಟೆಯೊಳಗೆ ಬಂಧಿಸಿ ಕರೆತಂದಿದ್ದಾರೆ. ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.