ನವದೆಹಲಿ : ದೆಹಲಿಯಲ್ಲಿ ಅತ್ಯಾಚಾರ ಮತ್ತು ಕೊಲೆಗೀಡಾಗಿದ್ದ ಬಾಲಕಿಯ ಕುಟುಂಬಕ್ಕೆ ನ್ಯಾಯ ಕೊಡಿಸುವುದಾಗಿ ಹೇಳಿ ಅವರೊಂದಿಗಿನ ತಮ್ಮ ಫೋಟೋ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದ ಕಾಂಗ್ರೆಸ್ ಸಂಸದ ರಾಹಲ್ ಗಾಂಧಿ ಕೇವಲ ತಮಗಷ್ಟೇ ಕಾನೂನು ಸಮಸ್ಯೆ ತಂದುಕೊಂಡಿಲ್ಲ. ಇದೀಗ, ಈ ಸಂಬಂಧವಾಗಿ ಫೇಸ್ಬುಕ್ ಅಧಿಕಾರಿಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್ಸಿಪಿಸಿಆರ್)ದ ಸಮನ್ಸ್ ಜಾರಿಯಾಗಿದೆ.
ರೇಪ್ ಸಂತ್ರಸ್ತೆಯ ಅಥವಾ ಆಕೆಯ ಕುಟುಂಬದ ಗುರುತು ಬಹಿರಂಗಪಡಿಸುವ ಫೋಟೋ ಅಥವಾ ಮಾಹಿತಿಯನ್ನು ಯಾವುದೇ ಮಾಧ್ಯಮದಲ್ಲಿ ಬಹಿರಂಗಪಡಿಸಬಾರದು ಎಂದು ಕಾನೂನು ಹೇಳುತ್ತದೆ. ಆದರೆ, ಸಂತ್ರಸ್ತ ಬಾಲಕಿಯ ಮನೆಗೆ ಭೇಟಿ ನೀಡಿದ್ದ ರಾಹುಲ್ ಆ ಸಮಯದ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಶೇರ್ ಮಾಡಿಬಿಟ್ಟಿದ್ದರು. ಇದರಿಂದಾಗಿ ಕೂಡಲೇ ಆ ಫೋಟೋ ವಿಡಿಯೋಗಳನ್ನು ತೆಗೆದುಹಾಕಿ, ಖಾತೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಟ್ವಿಟರ್ ಜೊತೆಗೆ ಇನ್ಸ್ಟಾಗ್ರಾಂಗೂ ಎನ್ಸಿಪಿಸಿಆರ್ ನೋಟೀಸು ನೀಡಿತ್ತು.
ಇದನ್ನೂ ಓದಿ: ಸಿ.ಟಿ.ರವಿಗೆ ಟಾಂಗ್ ಕೊಡೋ ಭರದಲ್ಲಿ ಪ್ರಿಯಾಂಕ ಖರ್ಗೆಯಿಂದ ಮಾಜಿ ಪ್ರಧಾನಿ ವಾಜಪೇಯಿ ಅವಹೇಳನ
ಟ್ವಿಟರ್ ಸಂಸ್ಥೆಯು ರಾಹುಲ್ ಗಾಂಧಿ ಅವರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕ್ರಮ ತೆಗೆದುಕೊಂಡಿತ್ತು. ಇಂದಷ್ಟೇ ರಾಹುಲ್ರ ಖಾತೆಗೆ ವಾಪಸ್ ಚಾಲ್ತಿ ನೀಡಲಾಗಿದೆ. ಆದರೆ ಇನ್ಸ್ಟಾಗ್ರಾಂನ ಒಡೆತನ ಹೊಂದಿದ ಫೇಸ್ಬುಕ್ ಅಧಿಕಾರಿಗಳು ರಾಹುಲ್ ಗಾಂಧಿ ಅವರ ಖಾತೆಯ ವಿಚಾರವಾಗಿ ಎನ್ಸಿಪಿಸಿಆರ್ ನೋಟೀಸಿನ ಅನ್ವಯ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನಲಾಗಿದೆ.
ಯಾವುದೇ ಕ್ರಮ ಅಥವಾ ಪ್ರತಿಕ್ರಿಯೆ ನೀಡದಿರುವ ಬಗ್ಗೆ ಗರಂ ಆಗಿರುವ ಎನ್ಸಿಪಿಸಿಆರ್, ಇದೀಗ ಫೇಸ್ಬುಕ್ಗೆ ಎರಡನೇ ಪತ್ರ ಬರೆದಿದೆ. ಗಾಂಧಿ ಅವರ ಖಾತೆಯ ಬಗೆಗೆ ತೆಗೆದುಕೊಂಡಿರುವ ಕ್ರಮದ ವಿವರಗಳೊಂದಿಗೆ ಫೇಸ್ಬುಕ್ನ ಸಂಬಂಧಿತ ಅಧಿಕಾರಿಗಳು ಬರುವ ಮಂಗಳವಾರ (ಆಗಸ್ಟ್ 17) ರ ಸಂಜೆ 5 ಗಂಟೆಗೆ ದೆಹಲಿಯ ಜನಪಥ್ನಲ್ಲಿರುವ ಆಯೋಗದ ಕಚೇರಿಗೆ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಬೇಕು ಎಂದು ಎನ್ಸಿಪಿಸಿಆರ್ ಸೂಚಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)