ನವದೆಹಲಿ: ದೆಹಲಿಯ ಸದನ ಸಮಿತಿ ನೀಡಿದ್ದ ನೋಟಿಸ್ ಸಂಬಂಧ ಫೇಸ್ಬುಕ್ ಇಂಡಿಯಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಬುಧವಾರ ಫೇಸ್ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಸರ್ವೋಚ್ಚ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ.
ದೆಹಲಿ ವಿಧಾನಸಭೆಯ ಶಾಂತಿ ಹಾಗೂ ಸೌಹಾರ್ದ ಸಮಿತಿಯು ಎರಡು ದಿನಗಳ ಹಿಂದೆ ಫೇಸ್ಬುಕ್ ಸಂಸ್ಥೆಗೆ ಹೊಸ ಹಾಗೂ ಅಂತಿಮ ಸಮನ್ಸ್ ಜಾರಿ ಮಾಡಿತ್ತು. ಮಾತ್ರವಲ್ಲ ಫೇಸ್ಬುಕ್ ಇಂಡಿಯಾದ ಪ್ರತಿನಿಧಿಗಳು ಬುಧವಾರದೊಳಗೆ ಸಮಿತಿ ಮುಂದೆ ಹಾಜರಾಗಬೇಕು ಎಂಬುದಾಗಿ ಸಮನ್ಸ್ ಮೂಲಕ ತಾಕೀತು ಮಾಡಿತ್ತು.
ದ್ವೇಷಪೂರಿತ ಪೋಸ್ಟ್ ಸಂಬಂಧ ನಿಯಮ ರೂಪಿಸಲು ಫೇಸ್ಬುಕ್ ಉದ್ದೇಶಪೂರ್ವಕವಾಗಿ ನಿರಾಸಕ್ತಿ ತೋರುತ್ತಿದೆ ಎಂಬ ಹಿನ್ನೆಲೆಯಲ್ಲಿ ಈ ಸಮನ್ಸ್ ಜಾರಿಗೊಳಿಸಲಾಗಿತ್ತು. ಹೀಗಾಗಿ ಫೇಸ್ಬುಕ್ ಇಂಡಿಯಾ ಇದೀಗ ಆ ಸಮನ್ಸ್ ಔಚಿತ್ಯ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. (ಏಜೆನ್ಸೀಸ್)