ಬಿಜೆಪಿ ಮುಖಂಡ ಟಿ.ರಾಜಾ ಸಿಂಗ್ ಅವರಿಗೆ ಫೇಸ್ಬುಕ್ ಬಹುದೊಡ್ಡ ಶಾಕ್ ನೀಡಿದೆ. ದ್ವೇಷ, ಹಿಂಸೆಯನ್ನು ಪ್ರಚೋದಿಸುವ ವಿಚಾರಗಳನ್ನು ಪೋಸ್ಟ್ ಮಾಡುವ ಮೂಲಕ ನಮ್ಮ ನೀತಿ-ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿರುವ ಫೇಸ್ಬುಕ್, ರಾಜಾಸಿಂಗ್ ಅವರನ್ನು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಎರಡೂ ವೇದಿಕೆಯಿಂದ ನಿಷೇಧಿಸಿದೆ. ಹಾಗೇ ಫೇಸ್ಬುಕ್ನಲ್ಲಿ ಹಿಂಸಾಚಾರ ಉತ್ತೇಜಿಸುವ, ದ್ವೇಷ ಪ್ರಚೋದಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಎಲ್ಲರನ್ನೂ ನಿಷೇಧಿಸುತ್ತೇವೆ ಎಂದೂ ಹೇಳಿದೆ. ಸದ್ಯ ರಾಜಾ ಸಿಂಗ್ ಅವರ ಅಕೌಂಟ್ನ್ನು ಫೇಸ್ಬುಕ್ ತೆಗೆದುಹಾಕಿದೆ.
ಈಗಾಗಲೇ ಟಿಎಂಸಿ ಸೇರಿ ಕೆಲವು ಪ್ರತಿಪಕ್ಷಗಳು ಫೇಸ್ಬುಕ್ ಬಿಜೆಪಿ ಪರವಾಗಿದೆ ಎಂದು ಹೇಳುತ್ತಿವೆ. ಈ ಮಧ್ಯೆ ಫೇಸ್ಬುಕ್ ದುರ್ಬಳಕೆ ಆಗುತ್ತಿರುವ ಬಗ್ಗೆ ಚರ್ಚಿಸಲು ಸಂಸದೀಯ ಸಮಿತಿಯು ಅದರ ಪ್ರತಿನಿಧಿಗಳನ್ನು ಕರೆಸಿಕೊಂಡಿತ್ತು.
ಅದಕ್ಕೂ ಮೊದಲು ಮಂಗಳವಾರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಫೇಸ್ಬುಕ್ ಸಿಇಒಗೆ ಪತ್ರ ಬರೆದು, ಸಾಮಾಜಿಕ ಜಾಲತಾಣ ನಿರ್ವಹಣಾ ತಂಡದಲ್ಲಿರುವ ಕೆಲವು ಸದಸ್ಯರು ರಾಜಕೀಯ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಸತತವಾಗಿ ಚುನಾವಣೆಯಲ್ಲಿ ಸೋಲುತ್ತಿರುವ ಪಕ್ಷಗಳ ಜತೆ ಸೇರಿಕೊಂಡು ಪ್ರಧಾನಮಂತ್ರಿ ಸೇರಿ ಹಲವು ರಾಜಕೀಯ ಮುಖಂಡರ ನಿಂದನೆಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದೂ ಆರೋಪಿಸಿದ್ದರು. (ಏಜೆನ್ಸೀಸ್)
ಇಬ್ಬರು ಭಾರತೀಯರನ್ನು ಉಗ್ರಪಟ್ಟಿಗೆ ಸೇರಿಸುವ ಪಾಕ್ ಪ್ರಯತ್ನಕ್ಕೆ ಪಂಚ ರಾಷ್ಟ್ರಗಳ ಪಂಚ್