ಬಾಳೆಹೊನ್ನೂರು: ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಒತ್ತಡಕ್ಕೆ ಒಳಗಾಗದೆ ಹಬ್ಬದಂತೆ ಸಂಭ್ರಮಿಸಬೇಕು. ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ರೋಟರಿ ಕ್ಲಬ್ನಿಂದ ಸೋಮವಾರ ಆಯೋಜಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ಪರ್ಧೆಗಳು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಸಹಕಾರಿ. ಪರೀಕ್ಷಾ ಸಂದರ್ಭ ಒತ್ತಡ ಕಡಿಮೆ ಮಾಡಲು ಕೂಡ ಪೂರಕ ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಯಜ್ಞಪುರುಷ ಭಟ್ ಮಾತನಾಡಿ, ಒತ್ತಡದಲ್ಲಿರುವ ವ್ಯಕ್ತಿಗಳಿಗೆ ಚುಟುಕು ಸಾಹಿತ್ಯ ಮನಸ್ಸನ್ನು ಹಗುರಗೊಳಿಸುತ್ತದೆ. ಹಾಸ್ಯಪ್ರಜ್ಞೆ ಇಲ್ಲದ ಬದುಕು ನಿರರ್ಥಕ. ಚುಟುಕು ಸಾಹಿತ್ಯ ಕೇವಲ ಹಾಸ್ಯಗೋಷ್ಠಿಗೆ ಸೀಮಿತವಲ್ಲ. ಸಮಾಜವನ್ನು ಜಾಗೃತಿಗೊಳಿಸುವ ಪ್ರಕಾರ ಎಂದರು.
ಸಂದರ್ಭಕ್ಕೆ ತಕ್ಕಂತೆ ಚುಟುಕುಗಳನ್ನು ರಚಿಸುವ ಸಾಮರ್ಥ್ಯವನ್ನು ಅಳವಡಿಸಿಕೊಳ್ಳಬೇಕು. ಪದಗಳ ಸಂಗ್ರಹಕ್ಕೆ ನಿರಂತರ ಅಧ್ಯಯನ ಮಾಡಬೇಕು. ನಿತ್ಯವೂ ದಿನಪತ್ರಿಕೆ ಓದುವುದರಿಂದ ಅಪಾರ ಮಾಹಿತಿ ಲಭ್ಯವಾಗುತ್ತದೆ. ಪತ್ರಿಕೆಯೊಂದು ವಿಶ್ವವಿದ್ಯಾಲಯವಿದ್ದಂತೆ ಎಂದು ತಿಳಿಸಿದರು.
ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ಅಧ್ಯಯನ ಮಾಡಿದರೆ ಉತ್ತಮ ಸಾಧನೆ ಮಾಡಬಹುದು. ಪ್ರತಿಭೆ ಅನಾವರಣಕ್ಕೆ ಸಂಘ ಸಂಸ್ಥೆಗಳು ವೇದಿಕೆ ನಿರ್ಮಿಸಿ ಬಹುಮಾನ, ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಆಶುಭಾಷಣ ಸ್ಪರ್ಧೆಯಲ್ಲಿ ಶ್ರೀಲಕ್ಷ್ಮೀ (ಪ್ರ), ಸೂರ್ಯಪ್ರಕಾಶ್ (ದ್ವಿ), ಕೀರ್ತನಾ (ತೃತೀಯ), ಜಾನಪದ ಗೀತೆಯಲ್ಲಿ ಶ್ರೀಲಕ್ಷ್ಮೀ (ಪ್ರಥಮ), ನೀತಾ (ದ್ವಿ), ಸುರಕ್ಷಾ (ತೃ) ಸ್ಥಾನ ಪಡೆದರು. ಉಪನ್ಯಾಸಕರಾದ ಮಮತಾ, ಸುನೀತಾ, ನಾಗಶ್ರೀ, ಉಷಾ, ಆರ್ಯ, ವೀಣಾ, ರವಿಶಂಕರ್, ವಿದ್ಯಾರ್ಥಿಗಳಾದ ಸುರಕ್ಷಾ, ಶ್ರಾವ್ಯಶ್ರೀ, ಲಿನೆಟ್ ಲೋಬೋ ಇತರರಿದ್ದರು.