ಶಾಜಾಪುರ (ಮಧ್ಯಪ್ರದೇಶ): ಕರೊನಾ ಎರಡನೆಯ ಅಲೆ ಇಡೀ ಕುಟುಂಬಕ್ಕೆ ಕುಟುಂಬವನ್ನೇ ಬಲಿ ಪಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಎಷ್ಟೋ ಕುಟುಂಬದಲ್ಲಿ ಚಿತೆಗೆ ಅಗ್ನಿಸ್ಪರ್ಶ ಮಾಡಲೂ ಜನರಿಲ್ಲದ ಸ್ಥಿತಿ.
ಅಂಥದ್ದೇ ಒಂದು ನೋವಿನ ಘಟನೆ ನಡೆದಿರುವುದು ಮಧ್ಯಪ್ರದೇಶದ ಶಾಜಾಪುರದಲ್ಲಿ. ಮೃತರ ಚಿತೆಗೆ ಅಗ್ನಿ ಇಡುವುದಕ್ಕಾಗಿಯಾದರೂ ಕುಟುಂಬದಲ್ಲಿ ಒಬ್ಬ ಗಂಡುಮಗ ಬೇಕು ಎನ್ನುವ ಮಾತು ಇಂದು ನಿನ್ನೆಯದ್ದಲ್ಲ. ಆದರೆ ಈ ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಇದಾಗಲೇ ಅಲ್ಲಲ್ಲಿ ಮಹಿಳೆಯರು ಕೂಡ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿರುವ ಘಟನೆಗಳು ನಡೆದಿವೆ.
ಆದರೆ ಇಲ್ಲಿ ನಡೆದಿರುವುದು ಮಾತ್ರ ಬಹು ನೋವಿನ ಸಂಗತಿ. ಶಾಜಾಪುರದಲ್ಲಿನ ಸಕ್ಸೇನಾ ಕುಟುಂಬ ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿತ್ತು. ಇಡೀ ಕುಟುಂಬದ ಜವಾಬ್ದಾರಿ 25 ವರ್ಷದ ಮಗಳ ತನ್ವಿಯ ಮೇಲಿತ್ತು. ಸಹೋದರ ಹಾಗೂ ತಂದೆಯ ಸ್ಥಿತಿ ಚಿಂತಾಜನಕವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ತನ್ವಿಯ ಸಹೋದರ ನಾಲ್ಕು ದಿನಗಳ ಹಿಂದೆ ಮೃತಪಟ್ಟ.
ಮನೆಯಲ್ಲಿ ಪುರುಷರೆಂದು ಇದ್ದುದು ತಂದೆ ಅವಧೇಶ್ ಸಕ್ಸೇನಾ ಮಾತ್ರ. ಆದರೆ ಅವರ ಸ್ಥಿತಿಯೂ ಗಂಭೀರವಾಗಿತ್ತು. ಆದ್ದರಿಂದ ಸಹೋದರನ ಅಂತ್ಯಕ್ರಿಯೆಯ ಸಂಪೂರ್ಣ ಜವಾಬ್ದಾರಿ ಹೊತ್ತಳು ತನ್ವಿ. ಈಕೆಯೇ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಬಂದಿದ್ದಳು. ಇದಾಗಿ ನಾಲ್ಕೇ ದಿನದಲ್ಲಿ ಅಪ್ಪನೂ ಮೃತಪಟ್ಟರು. ಇಡೀ ಕುಟುಂಬಕ್ಕೆ ಆಕಾಶವೇ ಕಳಚಿಬಿದ್ದಂಥ ಅನುಭವ, ಈ ಸಂದರ್ಭದಲ್ಲಿಯೂ ಧೃತಿಗೆಡದ ತನ್ವಿ, ತಂದೆಯ ಅಗ್ನಿಸ್ಪರ್ಶವನ್ನೂ ಮಾಡಿ ಅಂತ್ಯಸಂಸ್ಕಾರ ನೆರವೇರಿಸಿದ್ದಾಳೆ.
ಒಂದೆಡೆ ಸಹೋದರ, ಇನ್ನೊಂದೆಡೆ ತಂದೆ… ಎಲ್ಲ ಸಂಪ್ರದಾಯ ಮುರಿದು ಈಕೆ ಅಂತ್ಯಕ್ರಿಯೆಯಲ್ಲಿ ತೊಡಗಿದ್ದಕ್ಕೆ ಕೆಲ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರೂ, ಅನೇಕ ಮಂದಿ ಈಕೆಯ ಪರವಾಗಿ ನಿಂತರು. ಇಂಥದ್ದೊಂದು ನೋವಿನ ಘಟನೆಯಿಂದಾಗಿ ಎಲ್ಲರೂ ದುಃಖದಲ್ಲಿ ಮುಳುಗಿದರು. ದೇವರೇ, ಕರುಣಿಸು… ಇನ್ನೂ ನಿನಗೆ ಕರುಣೆ ಬರಲಿಲ್ಲವೇ ಎಂದು ಕಣ್ಣೀರು ಸುರಿಸಿದರು ಗ್ರಾಮಸ್ಥರು.
ಸೋಂಕಿತನನ್ನು ಸಾಗಿಸಲು ಹಿಂದೇಟು- ಆಂಬುಲೆನ್ಸ್ ಚಲಾಯಿಸಿ ಆಸ್ಪತ್ರೆಗೆ ಸಾಗಿಸಿದ ಸಚಿವ!
ಲಿವಿಂಗ್ ಟುಗೆದರ್ ಏನೆಂದು ತಿಳಿಯದೇ ಮೋಸ ಹೋಗಿಬಿಟ್ಟೆ- ಗರ್ಭಿಣಿಯಾಗಿರೋ ನನ್ನ ಗತಿಯೇನು ಮೇಡಂ?