ಬಂಕಾಪುರ: ಹೊಸದಾಗಿ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಕೊಡಿ ಎಂದು ನಾವು ಕೇಳುತ್ತಿಲ್ಲ. ಈಗಾಗಲೇ ಸರ್ಕಾರ ಕುರುಬರನ್ನು ಎಸ್ಟಿ ಸಮುದಾಯಕ್ಕೆ ಸೇರಿಸಿದೆ. ಆದರೆ, ಅದು ಕೇವಲ ಐದು ಜಿಲ್ಲೆಗಳಿಗೆ ಸೀಮಿತಗೊಂಡಿದ್ದು, ಅದನ್ನು ರಾಜ್ಯದ ಎಲ್ಲ ಕುರುಬ ಸಮುದಾಯಕ್ಕೆ ಅನ್ವಯವಾಗಬೇಕು ಎಂಬುದು ನಮ್ಮ ಬೇಡಿಕೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊರವಲಯದ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ಕುರಿತು ಅಲೆಮಾರಿ(ಸಂಚಾರಿ) ಕುರಿಗಾರರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 1976ರಲ್ಲಿ ಕೇಂದ್ರ ಸರ್ಕಾರಕ್ಕೆ ಕಾಡು ಕುರುಬ, ಜೇನು ಕುರುಬ, ಕಾಟುನಾಯಕನ್, ಗೊಂಡ, ಕುರುಮನ್, ಕುರುಬ ಸೇರಿ ಒಟ್ಟು ಆರು ಹೆಸರುಗಳು ಎಸ್ಟಿಗೆ ಶಿಫಾರಸು ಆಗಿದೆ. ಅದರಲ್ಲಿ ಐದು ಹೆಸರು ಎಸ್ಟಿಗೆ ಸೇರ್ಪಡೆಯಾಗಿವೆ. ಕೊಡಗು ಜಿಲ್ಲೆಯಲ್ಲಿ ಮಾತ್ರ ಕುರುಬ ಎಸ್ಟಿಗೆ ಸೇರ್ಪಡೆಯಾಗಿದೆ. ಆದ್ದರಿಂದ ಐದು ಹೆಸರುಗಳಿಗೆ ನೀಡಿರುವ ಎಸ್ಟಿ ಸವಲತ್ತನ್ನು ಅಖಂಡ ಕರ್ನಾಟಕದ ಎಲ್ಲ ಕುರುಬರಿಗೆ ನೀಡಬೇಕು ಎಂಬ ಆಗ್ರಹ ನಮ್ಮದಾಗಿದೆ ಎಂದರು.
ಈಗಾಗಲೇ ಸಮುದಾಯ ಎಸ್ಟಿಗೆ ಸೇರ್ಪಡೆಯಾಗಿರುವುದರಿಂದ ನಮ್ಮ 21 ದಿನಗಳ ಪಾದಯಾತ್ರೆ ಹೋರಾಟ ಯಶಸ್ವಿಯಾಗಲಿದೆ. ಆದ್ದರಿಂದ 2021ರ ಜ. 15ರಿಂದ ಫೆ. 7ರವರೆಗೆ ನಡೆಯುವ ಪಾದಯಾತ್ರೆಯಲ್ಲಿ ಎಲ್ಲ ಅಲೆಮಾರಿ (ಸಂಚಾರಿ) ಕುರಿಗಾಯಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ರಾಜ್ಯ ಸಂಚಾರಿ ಕುರಿಗಾರರ ಸಂಘದ ಅಧ್ಯಕ್ಷ ವಿಠ್ಠಲ ಬನ್ನೆ ಮಾತನಾಡಿದರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಾರುತಿ ಹರಿಹರ, ಶಿವಾನಂದ ರಾಮಗೇರಿ, ಎಂ.ಎನ್. ಹೊನಕೇರಿ, ರಾಮಕೃಷ್ಣ ಆಲದಕಟ್ಟಿ, ಗಂಗಾಧರ ಗಡ್ಡೆ, ಲಿಂಗರಾಜ ಹಳವಳ್ಳಿ, ಬೀರಪ್ಪ ನಡಟ್ಟಿ, ನಿಂಗಪ್ಪ ಹೆಗಡೆ, ಅಜೀತ ಹಿರೇಕುರುಬರ, ಗುಳಪ್ಪ ಖಾನುಗೋಳ, ರಾಮು ಹೆಗಡೆ, ಫಕೀರಪ್ಪ ಕುರುಬರ, ಆನಂದ ರಾಣೆಬೆನ್ನೂರ ಮತ್ತಿತರರು ಉಪಸ್ಥಿತರಿದ್ದರು.